ಬ್ರುಮಡಿನ್ಹೊ (ಬ್ರೆಜಿಲ್): ಆಗ್ನೇಯ ಬ್ರೆಜಿಲ್ನಬೆಲೊ ಹೊರಿಜಾಂಟೆ ನಗರದ ಬಳಿ ಕಬ್ಬಿಣದ ಅದಿರು ಗಣಿಗಾರಿಕೆಯ ಹೂಳು ಸಂಗ್ರಹಿಸಿದ್ದ ಅಣೆಕಟ್ಟು ಒಡೆದ ಪರಿಣಾಮ ಉಂಟಾದ ಕೆಸರಿನ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, ಹಲವು ಮಂದಿ ಕಣ್ಮರೆಯಾಗಿದ್ದಾರೆ.
ಪ್ರವಾಹದಲ್ಲಿ ಕಣ್ಮರೆಯಾದವರಿಗಾಗಿರಕ್ಷಣಾ ತಂಡದವರು ಹೆಲಿಕಾಪ್ಟರ್ನಲ್ಲಿ ಶನಿವಾರ ಶೋಧ ನಡೆಸಿದಾಗ ಕೆಸರಿನಡಿ ಹೂತುಹೋಗಿದ್ದವರ ಶವಗಳು ಪತ್ತೆಯಾಗಿವೆ. ಇದುವರೆಗೆಸುಮಾರು 300 ಜನರು ಕಣ್ಮರೆಯಾಗಿರುವ ಅಂದಾಜು ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹೇಳಿದ್ದಾರೆ.
ಮಿನಾಸ್ ಗೆರೈಸ್ ರಾಜ್ಯದ ರಾಜ್ಯಪಾಲ ರೋಮಿ ಜೆಮಾ, ಈ ದುರಂತಕ್ಕೆ ಹೊಣೆಗಾರರಾದವರನ್ನು ಖಂಡಿತಾ ಶಿಕ್ಷೆಗೆ ಗುರಿಪಡಿಸದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬ್ರೆಜಿಲ್ನ ಗಣಿಗಾರಿಕೆಯ ದೈತ್ಯ ಕಂಪನಿ ವೇಲ್, ಗಣಿಗಾರಿಕೆ ನಡೆಸುತ್ತಿದ್ದು ಈ ಅಣೆಕಟ್ಟಿನಲ್ಲಿ ಗಣಿ ತ್ಯಾಜ್ಯ ಸಂಗ್ರಹಿಸಿತ್ತು. ಶುಕ್ರವಾರ ಮಧ್ಯಾಹ್ನ ನೌಕರರು ಊಟಕ್ಕೆ ಕುಳಿತಾಗ ಅಣೆಕಟ್ಟು ಒಡೆದಿದೆ. ಮಣ್ಣುಮಿಶ್ರಿತ ಕಂದುಬಣ್ಣದ ಕೆಸರು ಪ್ರವಾಹೋಪಾದಿಯಲ್ಲಿ ನುಗ್ಗಿ ಗಣಿಗಾರಿಕೆ ಪ್ರದೇಶದಲ್ಲಿದ್ದ ಕಟ್ಟಡ ಮತ್ತು ವಸತಿ ಸಂಕೀರ್ಣಗಳು ಕೊಚ್ಚಿಹೋಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.