ಅಬುಜಾ, ನೈಜೀರಿಯಾ: ನೈಜೀರಿಯಾದ ಉತ್ತರ ಕೇಂದ್ರ ಭಾಗದಲ್ಲಿ ಕೃಷಿಕರು ಹಾಗೂ ಅಲೆಮಾರಿ ದನಗಾಹಿ ಸಮುದಾಯವರ ನಡುವೆ ತೀವ್ರ ಹಿಂಸಾಚಾರ ನಡೆದಿದೆ. ಕಳೆದ ಎರಡು ದಿನದಲ್ಲಿ ಗುಂಡಿನ ದಾಳಿಯಿಂದ 50 ಗ್ರಾಮಸ್ಥರು ಅಸುನೀಗಿದ್ದಾರೆ.
ಹಿಂಸಾಚಾರದ ಹಿಂದೆಯೇ ಸ್ಥಳೀಯ ಆಡಳಿತವು ಮುಂಜಾಗ್ರತೆಯಾಗಿ 24 ಗಂಟೆ ಕರ್ಫ್ಯೂ ಜಾರಿಗೊಳಿಸಿದೆ. ಹಿಂಸಾಚಾರ ನಿಲ್ಲಿಸಲು ಮನವಿ ಮಾಡಿದೆ. ಗುಂಡಿನ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಮಾಂಗು ಜಿಲ್ಲೆಯಲ್ಲಿ ಕೆಲ ಗ್ರಾಮಗಳಿಗೆ ಮಂಗಳವಾರ ನುಗ್ಗಿದ್ದ ಬಂದೂಕುಧಾರಿಗಳು ನಿವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವಾಘವುಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಸಮುದಾಯ ಸಂಘಟನೆ ಆರೋಪಿಸಿದೆ. ಗುರುವಾರವೂ ಕೆಲ ಶವಗಳು ಪತ್ತೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಸಮುದಾಯದ ನಾಯಕ ಮಥಾಯಿಸ್ ಸೊಹೊಡೆನ್ ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ಗು, ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡಲು ಅಧ್ಯಕ್ಷ ಬೊಲ ಟಿನುಬು ಅವರಿಗೆ ಒತ್ತಾಯಿಸಿದ್ದಾರೆ. ಟಿನುಬು ಪ್ರಸ್ತುತ ಖಾಸಗಿ ಭೇಟಿಗಾಗಿ ಫ್ರಾನ್ಸ್ಗೆ ತೆರಳಿದ್ದಾರೆ.
ನೈಜೀರಿಯಾದಲ್ಲಿ ಭದ್ರತಾ ವ್ಯವಸ್ಥೆ ಸುಧಾರಿಸುವುದಾಗಿ ಟಿನುಬು ಚುನಾವಣೆ ವೇಳೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.