ADVERTISEMENT

ಪಾಕ್‌ನ ಪಂಜಾಬ್ ಪ್ರಾಂತ್ಯದ ರಸ್ತೆ, ಉದ್ಯಾನಗಳಿಗೆ ಕಾಶ್ಮೀರದ ಹೆಸರಿಡಲು ನಿರ್ಧಾರ

ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು

ಪಿಟಿಐ
Published 16 ಆಗಸ್ಟ್ 2019, 13:14 IST
Last Updated 16 ಆಗಸ್ಟ್ 2019, 13:14 IST
   

ಲಾಹೋರ್: ಕಾಶ್ಮೀರದ ಜನರ ಐಕ್ಯತೆ ಮತ್ತು ಬೆಂಬಲಾರ್ಥವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 36 ರಸ್ತೆಗಳು ಮತ್ತು 5 ದೊಡ್ಡ ಉದ್ಯಾನಗಳಿಗೆ ‘ಕಾಶ್ಮೀರ’ ಎಂದು ನಾಮಕಾರಣ ಮಾಡಲು ನಿರ್ಧರಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಶುಕ್ರವಾರ ತಿಳಿಸಿದ್ದಾರೆ.

ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತವು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನ 370ನೇ ವಿಧಿ ಪ್ರಕಾರ ಇದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ರಸ್ತೆ ಮತ್ತು ಉದ್ಯಾನಗಳಿಗೆ ‘ಕಾಶ್ಮೀರ’ದ ಹೆಸರಿಡಲು ನಿರ್ಧರಿಸಿದೆ.

‘ಪಂಜಾಬ್ ಸರ್ಕಾರವು ತನ್ನ ಪ್ರತಿಯೊಂದು ಜಿಲ್ಲೆಯ ಒಟ್ಟು 36 ರಸ್ತೆಗಳು ಮತ್ತು 5 ದೊಡ್ಡ ಉದ್ಯಾನಗಳಿಗೆ ಕಾಶ್ಮೀರ ರಸ್ತೆ ಮತ್ತು ಕಾಶ್ಮೀರ ಉದ್ಯಾನ ಎಂದು ಹೆಸರಿಡಲು ನಿರ್ಧರಿಸಿದೆ. ಕಾಶ್ಮೀರದ ಜನರ ಐಕತ್ಯತೆ ಮತ್ತು ಬೆಂಬಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಸ್ಮಾನ್ ಬುಜ್ದಾರ್ ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನವು ಗುರುವಾರ (ಆಗಸ್ಟ್ 15) ಕಪ್ಪು ದಿನವನ್ನಾಗಿ ಆಚರಿಸಿದೆ. ಬುಧವಾರ (ಆಗಸ್ಟ್ 14)ರಂದು ಪಾಕಿಸ್ತಾನವು ‘ಕಾಶ್ಮೀರದ ಐಕ್ಯತಾ ದಿನ’ವನ್ನಾಗಿಯೂ ಆಚರಿಸಿದೆ.

ಪಾಕಿಸ್ತಾನವೂ ತನ್ನ ಸ್ನೇಹಿತ ಚೀನಾದ ಜತೆಗೂಡಿ ಭಾರತದ ನಿರ್ಧಾರವನ್ನು ಪ್ರಶ್ನಿಸಿ, ವಿಶ್ವಸಂಸ್ಥೆಯ ರಕ್ಷಣಾ ಕೌನ್ಸಿಲ್‌ ಮೊರೆ ಹೊಕ್ಕಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ವಿಷಯವು ಭಾರತದ ಆಂತರಿಕ ವಿಷಯವಾಗಿದೆ ಎಂದು ಭಾರತವು ಈಗಾಗಲೇ ಅಂತರರಾಷ್ಟ್ರೀಯ ಸಮುದಾಯಗಳಿಗೆ ಸ್ಪಷ್ಟವಾಗಿ ಹೇಳಿದೆ. ಈ ವಿಷಯನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು ಎಂದೂ ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.