ವಾಷಿಂಗ್ಟನ್: ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ಕ್ಕೆ ನಿಗದಿಯಾಗಿದ್ದ ಅರ್ಜಿಯ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿರುವುದಾಗಿ ಅಮೆರಿಕ ನ್ಯಾಯಾಲಯ ತಿಳಿಸಿದೆ.
ಲಾಸ್ ಏಂಜಲೀಸ್ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಜಾಕ್ವೆಲಿನ್ ಚೂಲಿಜಿಯಾನ್ ಅವರು, ಸೋಮವಾರ ನೀಡಿರುವ ಆದೇಶದಲ್ಲಿ ರಾಣಾ ಹಸ್ತಾಂತರ ಪ್ರಕರಣದ ಅರ್ಜಿ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಈ ವಿಚಾರಣೆ ಸಂದರ್ಭದಲ್ಲಿ ರಾಣಾನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ.
ರಾಣಾ ಪರ ವಕೀಲರು ಮತ್ತು ಅಮೆರಿಕ ಸರ್ಕಾರದ ಪರ ವಕೀಲರೊಂದಿಗೆ ನಡೆದ ಮಾತುಕತೆಯ ನಂತರ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ. ಚರ್ಚೆಯ ವೇಳೆ, ಎರಡೂ ಕಡೆಯ ವಕೀಲರು ಜೂನ್ 24ರಂದು 1.30ರಂದು ವಿಚಾರಣೆ ನಡೆಸುವುದಕ್ಕೆ ಒಪ್ಪಿದ್ದಾರೆ.
ಈ ಮಧ್ಯೆ ರಾಣಾ ಪರ ವಕೀಲರು ಆತನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.