ಗುರುದೇವ ರವೀಂದ್ರನಾಥ್ ಠಾಕೂರರವರ ಜೀವನ, ಸಾಹಿತ್ಯ ನಮ್ಮ ದೇಶದ ಸಂಸ್ಕೃತಿಯ ಆಕಾರರೂಪ. ಅವರ ಮೃದು ಹೃದಯ, ಪ್ರಯೋಗಶೀಲತೆ, ಸೃಷ್ಟಿಯನ್ನು ಆರಾಧಿಸುವ ಮನಸ್ಸು, ಭಾಷೆಯ ಮೇಲಿನ ಪ್ರಭುತ್ವ, ವಿನಯಶೀಲತೆ, ಮೃದು ಹಾಸ್ಯ ಪ್ರವೃತ್ತಿ ಇವೆಲ್ಲ ಅವರನ್ನು ಅತ್ಯಂತ ವಿಶೇಷ ವ್ಯಕ್ತಿಯನ್ನಾಗಿ ಮಾಡಿದ್ದವು.
ಅವರೊಮ್ಮೆ ಭಾಷಣ ಮಾಡುತ್ತಿದ್ದಾಗ ಚಪ್ಪಲಿಯಲ್ಲಿದ್ದ ಮೊಳೆ ಬೆರಳಿನಲ್ಲಿ ಊರಿನಿಂತು ರಕ್ತ ಸುರಿಯತೊಡಗಿತು. ಗುರುದೇವ ಎದ್ದು ನಿಂತು ಮಾತನಾಡುತ್ತಿದ್ದಾರೆ. ಮುಂದೆ ಕುಳಿತವರಿಗೆ ಅದು ಕಾಣದು. ಭಾಷಣ ಅದೇ ರೀತಿ ಮುಂದುವರೆಯಿತು.
ಮಾತು ಮುಗಿಸಿ ತಮ್ಮ ಆಸನದ ಹತ್ತಿರ ಬರುವುದರಲ್ಲಿ ಚಪ್ಪಲಿಯೆಲ್ಲ ರಕ್ತದಲ್ಲಿ ನೆನೆದಿತ್ತು, ಬೆರಳಿನ ಗಾಯ ಕಣ್ಣಿಗೆ ಕಾಣುತ್ತಿತ್ತು. ಹತ್ತಿರದಲ್ಲಿದ್ದವರಿಗೆ ತುಂಬ ಆತಂಕವಾಯಿತು. `ಗುರುದೇವ, ಕಾಲಿಗೆ ಎಷ್ಟು ದೊಡ್ಡ ಗಾಯವಾಗಿದೆ. ತಕ್ಷಣವೇ ಯಾರಿಗಾದರೂ ಹೇಳಬಾರದೇ? ಗಾಯ ತುಂಬ ದೊಡ್ಡದಾಗಿದೆ ಮತ್ತು ಎಷ್ಟೊಂದು ರಕ್ತ ಬಸಿದುಹೋಗಿದೆ~ ಎಂದರು ಜೊತೆಯಲ್ಲಿದ್ದವರು.
ಆಗ ಗುರುದೇವ ಹೇಳಿದರು, `ಇಲ್ಲಿ ಜನ ಸೇರಿದ್ದು ಮುಖ್ಯವಾಗಿ ನನ್ನ ಭಾಷಣವನ್ನು ಕೇಳಲು. ಅಂಥ ಸನ್ನಿವೇಶದಲ್ಲಿ ನನ್ನ ನೋವನ್ನು, ದುಃಖವನ್ನು ಹೇಳಿಕೊಂಡು ರಸಾಭಾಸ ಮಾಡುವುದು ಸರಿ ಎನ್ನಿಸಲಿಲ್ಲ!~ ರಕ್ತಪಾತವಾಗಿದ್ದರೂ ರಸಾಭಾಸವಾಗದಂತೆ ಶ್ರಮಿಸಿದವರು ರವೀಂದ್ರನಾಥ್ ಠಾಕೂರರವರು.
ಖ್ಯಾತ ಸಂಸ್ಕೃತ ವಿದ್ವಾಂಸರಾದ ಪಂಡಿತ ಹಜಾರೀ ಪ್ರಸಾದ್ ದ್ವಿವೇದಿಯವರು ಗುರುದೇವರ ಆಮಂತ್ರಣದ ಮೇಲೆ ಶಾಂತಿನಿಕೇತನಕ್ಕೆ ಬಂದಿದ್ದರು. ಒಂದು ದಿನ ಸಂಜೆ ದ್ವಿವೇದಿಯವರು ತೋಟದಲ್ಲಿ ಕುಳಿತಿದ್ದಾರೆ.
ಯಾವುದೋ ಕಾವ್ಯ ಚಿಂತನೆಯಲ್ಲಿ ತಲ್ಲೀನರಾಗಿದ್ದಾರೆ. ಆ ಚಿಂತನೆಯಲ್ಲಿ ಮುಳುಗಿದವರಿಗೆ ಸಂಜೆ ಕಳೆದು ಕತ್ತಲಾದದ್ದು ತಿಳಿಯಲೇ ಇಲ್ಲ. ಚಂದ್ರನ ಬೆಳಕು ಮೇಲೇರಿ ಬಂತು. ಆಗ ಅಲ್ಲಿಗೆ ಗುರುದೇವ ಬಂದರು.
ಎಚ್ಚರವಿಲ್ಲದೇ ಕುಳಿತಿದ್ದ ದ್ವಿವೇದಿಯವರ ಹೆಗಲು ತಟ್ಟಿ ಎಚ್ಚರಿಸಿದರು. ತಕ್ಷಣ ದ್ವಿವೇದಿಯವರು ಈ ಲೋಕಕ್ಕಿಳಿದು ಗುರುದೇವರನ್ನು ನೋಡಿ ನಾಚಿಕೊಂಡರು. ಯಾಕೆಂದರೆ ಈ ತನ್ಮಯತೆಯಲ್ಲಿ ಅವರು ಉತ್ತರೀಯ ಏನೂ ಹೊದ್ದಿರಲಿಲ್ಲ, ಎದೆಯ ಮೇಲೆ ಬಟ್ಟೆ ಇಲ್ಲ,
ತಕ್ಷಣ ಮುಜುಗರದಿಂದ ಪಾರಾಗಲು ತಾವು ಉಟ್ಟಿದ್ದ ಧೋತರದಿಂದಲೇ ಅರ್ಧ ಎಳೆದು ಎದೆ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಅವರ ಈ ಕಷ್ಟವನ್ನು ನೋಡಿ ಗುರುದೇವರು ನಕ್ಕು ಹೇಳಿದರು. `ದ್ವಿವೇದಿಯವರೇ, ನಾಚಿಕೊಳ್ಳಬೇಡಿ. ಎದೆಯನ್ನು ಮುಚ್ಚಿಕೊಳ್ಳದಿರುವುದು ಸಂಸ್ಕೃತ ವಿದ್ವಾಂಸರು ಮತ್ತು ಇಂಗ್ಲೀಷ್ ಕಲಿತ ಮಹಿಳೆಯರ ಜನ್ಮಸಿದ್ಧ ಅಧಿಕಾರ.
~ ದ್ವಿವೇದಿಯವರೂ ನಗುವಿನಲ್ಲಿ ಸೇರಿ ಹೋದರು.1940ರಲ್ಲಿ ಗಾಂಧೀಜಿ ಶಾಂತಿನಿಕೇತನಕ್ಕೆ ಬಂದರು. ರವೀಂದ್ರರು ಅವರಿಗೆ ವಿಶೇಷ ಸ್ವಾಗತ ನೀಡಿ ಮಾವಿನ ತೋಪಿನಲ್ಲಿ ವಿಶೇಷವಾಗಿ ಮಣ್ಣಿನಿಂದ ಕಟ್ಟಿದ ಶ್ಯಾಮಲಿ ಎಂಬ ಕುಟೀರದಲ್ಲಿ ಅವರನ್ನು ಇಳಿಸಲಾಯಿತು. ಅದು ಬಾಪೂಜಿಗೆ ತುಂಬ ಇಷ್ಟವಾಯಿತು.
ಮಧ್ಯಾಹ್ನದ ಊಟವಾದ ಮೇಲೆ ಗಾಂಧೀಜಿ ಒಂದಷ್ಟು ವಿಶ್ರಾಂತಿ ತೆಗೆದುಕೊಂಡು ಹೊರಬಂದು ನೋಡಿದರೆ ಠಾಕೂರರು ಮರದ ಕೆಳಗೆ ಕುಳಿತು ಏನನ್ನೋ ಬರೆಯುತ್ತಿದ್ದಾರೆ. ಗಾಂಧೀಜಿ ಕೇಳಿದರು. `ಇದು ನನ್ನ ಸಲಹೆ ನಿಮಗೆ. ದಯವಿಟ್ಟು ಮಧ್ಯಾಹ್ನ ಒಂದು ಗಂಟೆಯಾದರೂ ವಿಶ್ರಾಂತಿ ಪಡೆಯಿರಿ.
ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.~ ಆಗ ಗುರುದೇವ ಹೇಳಿದರು, `ಅದು ಹೇಗೆ ಮಲಗಲಿ? ನನಗೆ ಬಾಲ್ಯದಲ್ಲಿ ಬ್ರಹ್ಮೋಪದೇಶವಾದಾಗ ಪುರೋಹಿತರು ಹೇಳಿದಂತೆ ಮಧ್ಯಾಹ್ನ ನಿದ್ರೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ಅದನ್ನು ಹೇಗೆ ಮುರಿಯಲಿ?~ ಗಾಂಧೀಜಿ ಆಶ್ಚರ್ಯ ಚಕಿತರಾದರು.
ಅರವತ್ತೈದಕ್ಕೂ ಹೆಚ್ಚು ವರ್ಷ ರವೀಂದ್ರರು ಮಧ್ಯಾಹ್ನ ವಿಶ್ರಾಂತಿ ಪಡೆದಿಲ್ಲ! ಎಲ್ಲರೂ ಸಾಮಾನ್ಯವಾಗಿ ಹೇಳಿಬಿಡುವ ಮಂತ್ರದ ಅರ್ಥವನ್ನು ಪಾಲಿಸಿದ್ದರು ಗುರುದೇವ. ಆಗ ಗಾಂಧಿ ಹೇಳಿದರು, `ನಿಮಗೆ ಈಗ ವಯಸ್ಸು ಕಮ್ಮಿಯಾಗುತ್ತಿಲ್ಲ. ನನಗೊಂದು ಭಿಕ್ಷೆ ನೀಡುತ್ತೀರಾ?~ `ನಿಮಗೆ ಭಿಕ್ಷೆಯೇ? ಏನದು?~ ಕೇಳಿದರು ಗುರುದೇವ.
ವಚನವನ್ನು ಕೊಡುವವರೆಗೆ ಗಾಂಧೀಜಿ ಬಿಡಲಿಲ್ಲ. ವಚನ ತೆಗೆದುಕೊಂಡ ಮೇಲೆ ಹೇಳಿದರು, `ಮಧ್ಯಾಹ್ನದ ವಿಶ್ರಾಂತಿ ನೀವು ನನಗೆ ಕೊಡುವ ಭಿಕ್ಷೆ. ಅದು ದೇಶಕ್ಕೆ ಬೇಕು.~ ರವೀಂದ್ರರು ಒಪ್ಪಿದರು. ನಂತರ ಬದುಕಿರುವವರೆಗೆ ಮಧ್ಯಾಹ್ನದ ವಿಶ್ರಾಂತಿಯನ್ನು ಮಹಾತ್ಮರಿಗೆ ನೀಡಿದ ಭಿಕ್ಷೆ ಎಂದೇ ಕರೆಯುತ್ತಿದ್ದರು.
ಈ ಮಹಾನುಭಾವರ ಸ್ಮರಣೆ ನಮಗೆ ಸದಾ ಚೇತೋಹಾರಿ, ಮಾರ್ಗದರ್ಶಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.