ADVERTISEMENT

ಕಾಂಕ್ರೀಟ್ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST

ಲ್ಯಾಟಿನ್‌ನ `ಕಾಂಕ್ರಿಟಸ್~ ಎಂಬ ಪದದಿಂದ  `ಕಾಂಕ್ರೀಟ್~ ಪದ ಬಳಕೆಗೆ ಬಂದಿದೆ.     ಕಾನ್ ಎಂದರೆ ಒಟ್ಟಾಗಿ, ಕ್ರೆಸೆರ್ ಎಂದರೆ ಬೆಳೆಯೋಣ ಎಂಬ ಅರ್ಥ ಬರುತ್ತದೆ.

ಕಾಂಕ್ರೀಟ್ ತಂತ್ರ ಮೊದಲು ಬಳಕೆಯಾಗಿದ್ದು ರೋಮನ್ನರ ಕಾಲದಲ್ಲಿ ಎಂಬ ಉಲ್ಲೇಖ ಇತಿಹಾಸದ ಪುಟಗಳಲ್ಲಿದೆ. ರೋಮ್ ಚಕ್ರಾಧಿಪತ್ಯದ ಪತನಾನಂತರ ಮರೆಗೆ ಸರಿದಿದ್ದ ಕಾಂಕ್ರೀಟ್ ಬಳಕೆ ಮತ್ತೆ 18ನೇ ಶತಮಾನದ ಮಧ್ಯಾಂತರದಲ್ಲಿ ಶುರುವಾಯಿತು.
ಕಾಂಕ್ರೀಟ್ ತಯಾರಿಸಿಕೊಳ್ಳಲು 1840ರಲ್ಲಿ ಮೊದಲ ಬಾರಿಗೆ ಪೋರ್ಟ್‌ಲ್ಯಾಂಡ್ ಸಿಮೆಂಟ್ ಬಳಸಲಾಯಿತು.

ಕಾಂಕ್ರೀಟ್ ಪಾತ್ರ ಕಟ್ಟಡ ನಿರ್ಮಾಣದಲ್ಲಿ ಪ್ರಮುಖವಾಗಿದೆ. ಸಿಮೆಂಟ್ ಮತ್ತು ನೀರು ಮಿಶ್ರಣವಾದರೆ ಅದುವೇ ಕಾಂಕ್ರೀಟ್.  ಇದನ್ನು ಪ್ಲಾಸ್ಟರಿಂಗ್ ನಂತರದಲ್ಲಿ ಗೋಡೆಗೆ ತೆಳುವಾಗಿ ಮೆತ್ತಿ ನಯಗೊಳಿಸಲು ಬಳಸಲಾಗುತ್ತದೆ. ಸಿಮೆಂಟ್‌ಗೆ  ಮರಳು-ನೀರು ಸೇರಿಸಿ ಮಾಡಿದ ಕಾಂಕ್ರೀಟನ್ನು ತಳಪಾಯದ ಕಲ್ಲು ಕಟ್ಟಡ ಭದ್ರಗೊಳಿಸಲು, ಇಟ್ಟಿಗೆ ಜೋಡಿಸಿ ಗೋಡೆ ಕಟ್ಟಲು, ನಂತರದಲ್ಲಿ ಗೋಡೆಗೆ ಪ್ಲಾಸ್ಟರಿಂಗ್ ಮಾಡಲು, ನೆಲಹಾಸು(ಟೈಲ್ಸ್) ಜೋಡಿಸಲು ಬಳಸಲಾಗುತ್ತದೆ.

ADVERTISEMENT

ಇದೇ ಮಿಶ್ರಣಕ್ಕೆ ಜಲ್ಲಿಕಲ್ಲು ಸಹ ಸೇರಿಕೊಂಡರೆ ಸಿದ್ಧವಾಗುವುದೇ ಮತ್ತೊಂದು ಬಗೆಯ ಕಾಂಕ್ರೀಟ್. ಇದನ್ನು ತಳಪಾಯದ ಬೆಡ್‌ಗೆ, ಗೋಡೆ  ಮೇಲೆದ್ದ ನಂತರ ಕಿಟಕಿ, ಬಾಗಿಲಿನ ಮೇಲ್ಭಾಗದ `ಸಜ್ಜ~, ತಾರಸಿಗೆ, ಮಹಡಿ ಮೆಟ್ಟಿಲಿಗೆ ಹಾಗೂ ಟೈಲ್ಸ್ ಹೊದಿಸುವುದಕ್ಕೂ ಮುನ್ನ ನೆಲವನ್ನು ಸಮತಟ್ಟುಗೊಳಿಸಲು ಬಳಸಲಾಗುತ್ತದೆ.

ಗೋಡೆ, ಗಾರೆ ನೆಲಕ್ಕೆ ಕಡೆಯದಾಗಿ ಹಾಕಲು ಸಿಮೆಂಟ್ ತಿಳಿ ಅಥವಾ ಗಟ್ಟಿ ಮಿಶ್ರಣ ಮಾಡಿಕೊಳ್ಳುವಾಗ ಸಿಮೆಂಟ್ ಮತ್ತು ನೀರು ಮಾತ್ರವೇ ಬಳಸುವುದರಿಂದ ಇಲ್ಲಿ ಯಾವುದು ಎಷ್ಟು ಪ್ರಮಾಣದಲ್ಲಿ ಅಗತ್ಯ ಎಂದು ಹೆಚ್ಚು ಯೋಚಿಸಿ ತಲೆಕೆಡಿಸಿಕೊಳ್ಳಬೇಕಿಲ್ಲ. ಗಾರೆ ಕೆಲಸದವರು ಅನುಭವದ ಆಧಾರದ ಮೇಲೆಯೇ ಸಿಮೆಂಟ್ ತಿಳಿ-ಗಟ್ಟಿಯನ್ನು ಮಿಶ್ರಣ ಮಾಡಿಕೊಳ್ಳುತ್ತಾರೆ.

ಆದರೆ, ಸಿಮೆಂಟ್, ಮರಳು-ನೀರಿನ ಮಿಶ್ರಣದ ಕಾಂಕ್ರೀಟ್ ಮಾಡಿಕೊಳ್ಳಲು ಮೂರೂ ಸಾಮಗ್ರಿ ಯಾವ ಪರಿಮಾಣದಲ್ಲಿ ಬೇಕಾಗುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ತಳಪಾಯದ ಕಲ್ಲಿನ ಕಟ್ಟಡಕ್ಕೆ ಬೇರೆ, ಇಟ್ಟಿಗೆಯ ಗೋಡೆ ನಿರ್ಮಾಣಕ್ಕೇ ಬೇರೆ ಲೆಕ್ಕದ ಮಿಶ್ರಣ ಮಾಡಿಕೊಳ್ಳಬೇಕು. ಇನ್ನು ಪ್ಲಾಸ್ಟರಿಂಗ್‌ಗೆ ಅಗತ್ಯವಾದ ಕಾಂಕ್ರೀಟ್ ಕಲೆಸಿಕೊಳ್ಳುವಾಗಿನ ಅನುಪಾತವೇ ಬೇರೆ ಬಗೆಯದು.

ಅಲ್ಲದೆ, ಈ ಮೂರೂ ಕೆಲಸಕ್ಕೆ ಬಳಸುವ ಮರಳೂ ಸಹ ಭಿನ್ನ ರೀತಿಯದಾಗಿರುತ್ತದೆ. ಕಲ್ಲಿನ ಕಟ್ಟಡದ ಕಾಂಕ್ರೀಟ್ ಮಿಶ್ರಣಕ್ಕೆ ನದಿಯಿಂದ ತೆಗೆದ ದಪ್ಪ ಮರಳು ಬೇಕಿದ್ದರೆ, ಪ್ಲಾಸ್ಟರಿಂಗ್‌ಗೆ ಕಲ್ಲು-ಕಸ-ಕಡ್ಡಿ ಇಲ್ಲದೆ ಶುದ್ಧವಾಗಿರುವ, ಸ್ವಲ್ಪ ನಯವಾಗಿರುವ ಮರಳು ಅಗತ್ಯವಿರುತ್ತದೆ.

ಜಲ್ಲಿಕಲ್ಲು-ಸಿಮೆಂಟ್-ಮರಳು-ನೀರು ಮಿಶ್ರಣದ ಕಾಂಕ್ರೀಟ್ ಮಾಡಿಕೊಳ್ಳುವಾಗಲೂ ತಾರಸಿಗೇ ಬೇರೆ ಲೆಕ್ಕ, ನೆಲ ಸಮತಟ್ಟುಗೊಳಿಸಲೇ ಇನ್ನೊಂದು ಪ್ರಮಾಣದಲ್ಲಿ ಕಲೆಸಿಕೊಳ್ಳಲಾಗುತ್ತದೆ.

ಈ ವಿವಿಧ ಬಗೆಯ ಕಾಂಕ್ರೀಟ್ ಮಿಶ್ರಣಕ್ಕೆ ಬಳಸಲಾಗುವ ಸಾಮಗ್ರಿಗಳ ಪ್ರಮಾಣ ಎಂಜಿನಿಯರ್ಸ್‌ ಲೆಕ್ಕದಲ್ಲಿ ಒಂದು ನಿಗದಿತ ಪ್ರಮಾಣದಲ್ಲಿದ್ದರೆ, ಮೇಸ್ತ್ರಿಗಳು, ಗಾರೆ ಕೆಲಸಗಾರರದು `ಅನುಭವ~ವನ್ನು ಆಧರಿಸಿದ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.