ADVERTISEMENT

‘ಟೆಂಪಲ್‌ ರನ್‌’ ಸಲ್ಯೂಷನ್‌

ಕುಮಾರ ಚಲವಾದಿ.ಹಾಸನ
Published 17 ಮಾರ್ಚ್ 2019, 20:01 IST
Last Updated 17 ಮಾರ್ಚ್ 2019, 20:01 IST
   

ಸಾಂದರ್ಭಿಕ ಮುಖ್ಯಮಂತ್ರಿಗಳ ಸಂದರ್ಶನ ನಡೆಸಲು ಕರೆ ಬಂತು! ಬಹಳ ಖುಷಿಯಿಂದ ಅವರನ್ನು ಭೇಟಿಯಾದೆ.
‘ಬನ್ನಿ ಬ್ರದರ್ ಬನ್ನಿ, ಬನ್ನಿ’ ಎಂದು ಸ್ವಾಗತಿಸಿದರು. ಸಂದರ್ಶನ ಪ್ರಾರಂಭಿಸಿದೆ.‘ಸಾರ್! ತಮ್ಮನ್ನು ಸಾಂ.ಮು.ಮಂ. ಎಂದು ಯಾಕೆ ಕರೆದುಕೊಂಡಿರಿ?’ ಕೇಳಿದೆ.

‘ನೋಡಿ ಬ್ರದರ್ ಇದು, ನಾನು ನನಗೇ ಕೊಟ್ಟುಕೊಂಡ ಬಿರುದಲ್ಲ! ಹಿಂದೆ ಏನಾಯಿತು ಎನ್ನುವುದನ್ನು ನೆನಪು ಮಾಡಿಕೊಳ್ಳಿ. ಹಿಂದೆ ನನಗೆ ಇದ್ದಕ್ಕಿದ್ದಂತೆ ಟ್ವೆಂಟಿ–20 ಆಡುವ ಅವಕಾಶ ಸಿಕ್ಕಿತು. ಈಗ, ಕೇವಲ ಮೂವತ್ತೇಳೇ ಶಾಸಕರಿದ್ದರೂ ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ, ನಾನು ಸಾಂ.ಮು.ಮಂ’ ಎಂದರು.

‘ಅದು ಸರಿ, ಸಾರ್. ಆದರೆ ಆಗ ನೀವು ನಿಮ್ಮ ಮಿತ್ರ ಪಕ್ಷಕ್ಕೆ ಬ್ಯಾಟಿಂಗ್‌ಗೇ ಅವಕಾಶ ನೀಡಲಿಲ್ಲ’ ಎಂದೆ.

ADVERTISEMENT

‘ನೋಡಿ, ಬ್ರದರ್ ನಾವು 20 ಓವರ್‌ಗಳಲ್ಲಿ ಬಾರಿಸಿದ ರನ್ನುಗಳನ್ನು ಅವರು 40 ಓವರ್‌ಗಳನ್ನು ಆಡಿದ್ದರೂ ಗಳಿಸುತ್ತಿರಲಿಲ್ಲ.ಸುಮ್ಮನೇ ಆಡಿ ಅವರು ದಣಿವು ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಅವರ ಒಳ್ಳೆಯದಕ್ಕೇ ಹಾಗೆ ಮಾಡಿದೆ’ ಎಂದರು.

‘ನಿಮ್ಮ ಟೆಂಪಲ್‌ ರನ್‌ ಬಗ್ಗೆ ಸ್ವಲ್ಪ ಹೇಳಿ’ ಎಂದೆ.

‘ವಿರೋಧ ಪಕ್ಷದವರು ರಾಮನ ಜಪ ಮಾಡಿ ಮಾಡಿ ಸುಸ್ತಾದರು. ಸ್ವಲ್ಪ ದಿವಸ ಅಯ್ಯಪ್ಪನಿಗೂ ಶರಣೆಂದರು. ಅವರು ಹೀಗೆ ಸಮಯ, ಸಂದರ್ಭ ನೋಡಿ ಭಾವನೆಗಳ ಜತೆ ಆಟ ಆಡ್ತಾರೆ. ನಾನು ಯಾವಾಗಲೂ ಭಾವನಾತ್ಮಕವಾಗೇ ಇರ್ತೀನಿ. ಅದಕ್ಕೇ ನನಗೆ ಕಣ್ಣೀರು ಯಾವಾಗ ಬೇಕಾದರೂ ಬರ್ತಾನೇ ಇರುತ್ತೆ. ನಾನು ಎಲ್ಲ ಸಂದರ್ಭಗಳಲ್ಲೂ ದೇವರನ್ನು ನೆನೆಸ್ಕೋತೀನಿ. ಚುನಾವಣೆ ಸಂದರ್ಭವಿರಲಿ, ಬರಗಾಲ–ಮಳೆಗಾಲವೇ ಆಗಿರಲಿ, ಉಗ್ರರ ದಾಳಿಯೇ ಇರಲಿ.ದೇವರು ಎಲ್ಲರಿಗೂ ಬೇಕು ತಾನೇ? ನಮ್ಮಂಥ ರಾಜಕಾರಣಿಗಳಿಂದ ಸಾಧ್ಯವಾಗದೇ ಇರೋ ಕೆಲಸ- ಕಾರ್ಯಗಳು ದೇವಸ್ಥಾನಗಳ ಭೇಟಿಯಿಂದ ಸಾಧ್ಯವಾಗುತ್ತವೆ. ಅದಕ್ಕೇ ನಾನು ಟೆಂಪಲ್ ವಿಸಿಟ್ ಮಾತ್ರ ನಿಲ್ಲಿಸೋಲ್ಲ, ಏನಂತೀರಿ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.