ADVERTISEMENT

ಅನುಷ್ಠಾನಕ್ಕೆ ಬದ್ಧತೆ ಪ್ರದರ್ಶಿಸಲಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಅತ್ಯಾಚಾರ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲದೆ ಆರೋಪಿಗಳು ಬಿಡುಗಡೆ ಆಗುವಂತಹ ನಿದರ್ಶನಗಳು ಹೇರಳವಾಗಿವೆ.   ಇದಕ್ಕೆ ಮುಖ್ಯ ಕಾರಣ  ಅತ್ಯಾಚಾರಕ್ಕೆ ಸಂಬಂಧಿಸಿದ ಸೂಕ್ತ ರೀತಿಯ ವೈದ್ಯಕೀಯ  ಸಾಕ್ಷ್ಯ ಸಂಗ್ರಹಿಸುವಲ್ಲಿನ ವೈಫಲ್ಯ. ಅದೂ  ಈ ಸಾಕ್ಷ್ಯ ಸಂಗ್ರಹಕ್ಕಾಗಿ  ಅತ್ಯಾಚಾರ­ಕ್ಕೊಳಗಾದ ಮಹಿಳೆಯರು ಒಳಗಾಗಬೇಕಾದ ವೈದ್ಯಕೀಯ ಪರೀಕ್ಷೆಗಳಂತೂ ಓಬೀರಾಯನ ಕಾಲದ್ದು ಹಾಗೂ ಅವೈಜ್ಞಾನಿಕವಾದದ್ದು. ಇವುಗಳಲ್ಲಿ ಎರಡು ಬೆರಳು ಪರೀಕ್ಷೆಯಂತೂ (ಟೂ ಫಿಂಗರ್ ಟೆಸ್ಟ್ –ಟಿಎಫ್‌ಟಿ) ಅಮಾನವೀಯವಾದದ್ದು.

ಈಗ ಈ ಪರೀಕ್ಷೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅತ್ಯಾಚಾರ ಸಂತ್ರಸ್ತರ ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆ­­ಗಳನ್ನು ನಡೆಸಲು ಅಗತ್ಯ ಉಪಕರಣಗಳನ್ನು ಒಳಗೊಂಡ ಪ್ರತ್ಯೇಕ ಕೋಣೆ ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗದರ್ಶಿ ಸೂತ್ರಗಳು ಹೇಳಿವೆ.  2011ರಲ್ಲೇ ಮಹಾರಾಷ್ಟ್ರ ಸರ್ಕಾರ ಈ ಎರಡು ಬೆರಳಿನ ಪರೀಕ್ಷೆಯನ್ನು ನಿಷೇಧಿಸಿತ್ತು.  ಅತ್ಯಾಚಾರ ಸಂತ್ರಸ್ತೆಯ ಮೇಲೆ ನಡೆಸಲಾಗುವ  ‘ಎರಡನೇ ಲೈಂಗಿಕ ಹಲ್ಲೆ’ ಎಂದು ಬಣ್ಣಿಸಲಾಗುವ ಈ ಪರೀಕ್ಷೆಯನ್ನು ನಿಷೇಧಿಸಲು ತಡವಾಗಿ­ಯಾದರೂ ಕೇಂದ್ರ ಮುಂದಾ­ದದ್ದು ಸ್ವಾಗತಾರ್ಹ.

ಮಹಿ­ಳೆಯ ಲೈಂಗಿಕ ಬದುಕಿನ ಇತಿಹಾಸ  ಅರಿತು­ಕೊಳ್ಳಲು ನಡೆಸಲಾ­ಗು­ತ್ತಿದ್ದ  ಈ ಪರೀಕ್ಷೆ ಅಮಾನವೀಯವಷ್ಟೇ ಅಲ್ಲ. ಮಹಿಳೆಯನ್ನು ಅವಮಾನಿ­ಸು­ವಂತಹದ್ದೂ ಆಗಿತ್ತು.   ಭಾರತೀಯ ಸಾಕ್ಷ್ಯ ಕಾಯಿ­ದೆಗೆ 2002ರಲ್ಲಿಯೇ ತಿದ್ದುಪಡಿ­ಯಾಗಿದೆ. ಈ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯ  ಈ ಹಿಂದಿನ ಲೈಂಗಿಕ ಬದುಕಿನ ಕುರಿತಾಗಿ  ಪ್ರಸ್ತಾಪ ಮಾಡು­ವುದನ್ನು ನಿಷೇಧಿಸಲಾಗಿದೆ.  2003ರಲ್ಲಿ  ಸುಪ್ರೀಂಕೋರ್ಟ್ ಸಹ ಇಂತಹ ಪರೀಕ್ಷೆ  ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಅತ್ಯಾಚಾರದಿಂದಾಗುವ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮ­ಗಳನ್ನು ನಿರ್ವಹಿಸಬೇಕಾದ ಅಗತ್ಯವನ್ನು ಸರ್ಕಾರ ಕಡೆಗೂ ಮನಗಂಡಿದೆ ಎಂಬುದೇ ಸಮಾಧಾನ. ಅತ್ಯಾಚಾರ ಸಂತ್ರಸ್ತೆಯ ವಿಧಿ ವಿಜ್ಞಾನ, ವೈದ್ಯಕೀಯ ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಮೀಸಲಿರಿಸುವುದು ಕೇಂದ್ರದ ಹೊರಡಿಸಿರುವ ಹೊಸ ಮಾರ್ಗದರ್ಶಿಸೂತ್ರಗಳ ಪ್ರಕಾರ ಈಗ ಕಡ್ಡಾಯ. ಲೈಂಗಿಕ ಹಿಂಸಾಚಾರದಿಂದ ಕುಗ್ಗಿದವರನ್ನು ಮತ್ತಷ್ಟು ಅವ­ಮಾನಿಸದೆ ಘನತೆಯಿಂದ ನಡೆಸಿಕೊಳ್ಳಬೇಕೆಂಬ ಆಶಯ ಇಲ್ಲಿ   ವ್ಯಕ್ತಪಡಿ­ಸಲಾಗಿದೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ­ಗಳಲ್ಲಿ ಇದು ಅನುಷ್ಠಾನವಾಗಬೇಕಿದೆ. ಆದರೆ  ಆಸ್ಪತ್ರೆಗಳಲ್ಲಿನ ಮೂಲ­ಸೌಕರ್ಯ­ಗಳು ಆ ಮಟ್ಟಿಗೆ ಸಜ್ಜುಗೊಂಡಿವೆಯೇ ಎಂಬುದು ಪ್ರಶ್ನೆ.  ಈ ಬಗ್ಗೆ ಸರ್ಕಾರ ಮೊದಲು ಗಮನಹರಿಸಬೇಕು. ಅತ್ಯಾಚಾರದಂತಹ ಅಪರಾಧ­ಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸಿಬ್ಬಂದಿಗೂ  ಸಂವೇ­ದನಾ­­ಶೀಲತೆಯ ತರಬೇತಿ ಅಗತ್ಯ.  ಏಕೆಂದರೆ ಸಂತ್ರಸ್ತೆಗೆ ಆಪ್ತ ಸಲಹೆ, ಸಾಮಾಜಿಕ ಬೆಂಬಲ ಒದಗಿಸಬೇಕು. ಈ ಸುಧಾರಣೆ ಜಾರಿಗೆ ತರಲು  ಬದ್ಧತೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.