ADVERTISEMENT

ಮೌಢ್ಯಕ್ಕೆ ಕೊನೆಯೆಂದು?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ದಾವಣಗೆರೆಯಲ್ಲಿ ನಡೆದ ಬೇವಿ­ನು­ಡು­ಗೆಯ ಅರೆಬೆತ್ತಲೆ ಸೇವೆ  ಹಾಗೂ ಕೊಪ್ಪಳ ಜಿಲ್ಲೆಯ ಹಿರೇ­ಸಿಂಧೋಗಿ ಗ್ರಾಮ­ದಲ್ಲಿ ಆಚರಣೆಯಲ್ಲಿರುವ ದೇವದಾಸಿ ಪದ್ಧತಿ, ಮೌಢ್ಯಗಳು ಇನ್ನೂ ಜೀವಂತ   ವಾಗಿರುವುದರ ಪ್ರತೀಕ. ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಮಹಿಳೆ ಯರನ್ನು ಶತ­ಮಾನ­ಗಳಿಂದಲೂ ಕಂದಾಚಾರದ ಕೂಪಕ್ಕೆ  ದೂಡಲಾಗುತ್ತಿದೆ.

ಈ ಅಮಾನವೀಯ ಆಚರಣೆಯನ್ನು ಪೋಷಿಸಿಕೊಂಡು ಬರುತ್ತಿರು ವುದು  ಖಂಡನಾರ್ಹ. ಅರೆಬೆತ್ತಲೆ ಸೇವೆ, ದೇವದಾಸಿ ಪದ್ಧತಿಗೆ ಹಿಂದುಳಿದ ಇಲ್ಲವೇ ದಲಿತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆತಂಕದ ವಿಷಯ. ಅಜ್ಞಾನ, ಬಡತನ,  ಅರಿವಿನ ಕೊರತೆಯೇ ಇದಕ್ಕೆ ಕಾರಣ. ಉನ್ನತ ಶಿಕ್ಷಣ ಪಡೆದ ಮಹಿಳೆಯರೂ ಬೇವಿನ ಉಡುಗೆ ತೊಟ್ಟು ಅರೆ­ಬೆತ್ತಲೆ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು  ಆತಂಕ­ಕಾರಿ.

21ನೇ ಶತ­ಮಾನ  ವೈಚಾರಿಕ ಜಾಗೃತಿಯ ಕಾಲ ಎಂದು ಭಾವಿಸಿರುವಾಗ ದೇವ­ದಾಸಿ, ಅರೆಬೆತ್ತಲೆ ಸೇವೆಯಂಥ ಅನಿಷ್ಟ ಆಚರಣೆಗಳು   ರೂಢಿಯಲ್ಲಿರು ವುದು ಸಮಾಜದಲ್ಲಿನ ಪ್ರಜ್ಞಾವಂತಿಕೆಯ ಕೊರತೆಯನ್ನು ತೋರಿಸುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ  ನಡೆಯುವ ದುರ್ಗಾಂ­ಬಿ­ಕಾದೇವಿ ಜಾತ್ರೆಯಲ್ಲಿ  (ದುಗ್ಗಮ್ಮನ ಹಬ್ಬ)­ ಆರೋಗ್ಯ ಭಾಗ್ಯ, ಸಂತಾನ ಭಾಗ್ಯ, ಸಂಕಷ್ಟ ನಿವಾರಣೆಗಾಗಿ ದೇವಿಗೆ ಭಕ್ತರು ಬೇವಿನ ಉಡುಗೆಯ ಹರಕೆ ಹೊರು­­­ತ್ತಾರೆ. ಅಷ್ಟೇ ಅಲ್ಲ, ಈ ಜಾತ್ರೆ­ಯಲ್ಲಿ ಕೋಣ ಬಲಿಯೂ ನಡೆಯು­ತ್ತದೆ. ಜಿಲ್ಲಾ ಆಡಳಿತ, ಪೊಲೀಸ್ ಇಲಾ­ಖೆಯ ಕಣ್ಣು­ತಪ್ಪಿಸಿ ಈ ಬಾರಿ ಕೋಣವನ್ನು ಬಲಿ ಕೊಡಲಾಗಿದೆ.  

ಮಕ್ಕಳು, ಮಹಿಳೆ­ಯರು ನಿರಾತಂಕ­ವಾಗಿ  ಅರೆಬೆತ್ತಲೆ ಸೇವೆ ನಡೆಸಿದರೂ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಏನೂ ಕ್ರಮ­ಕೈಗೊಂಡಿಲ್ಲ. ಇದು ಆಡಳಿತ ಹಾಗೂ ಕಾನೂನಿನ ವೈಫಲ್ಯಗಳನ್ನು  ಎತ್ತಿ ತೋರಿಸುತ್ತದೆ. ಇಂತಹ ಆಚರಣೆಗಳು ಜರುಗುವ ಮುನ್ನವೇ ಕಟ್ಟುನಿಟ್ಟಿನ  ಕ್ರಮ ಕೈಗೊಂಡಿದ್ದಲ್ಲಿ ಅರೆ­ಬೆತ್ತಲೆ ಸೇವೆ, ಕೋಣಬಲಿಯನ್ನು ತಡೆಯ­ಬಹುದಿತ್ತು. ಆದರೆ ಸಂಪ್ರದಾಯ, ಜನರ ನಂಬಿಕೆ ಪುರಸ್ಕರಿಸುವ ನೆಪದಿಂದ ಕಾನೂನು ಪಾಲಕರೂ ಸುಮ್ಮನಿರುತ್ತಾರೆ. ಕಂದಾಚಾರ ನಿರಂತರವಾಗಿ ನಡೆಯುತ್ತದೆ.

ರಾಜ್ಯದಲ್ಲಿ ದೇವ­ದಾಸಿ ಪುನರ್ವಸತಿ ಯೋಜನೆ ಇದ್ದಾ­ಗಲೂ ಹಿರೇ­ಸಿಂಧೋಗಿ ಗ್ರಾಮ­ದಲ್ಲಿ ಮುತ್ತು­ ಕಟ್ಟು­ವಂತಹ ಆಚರಣೆ ಅಬಾಧಿತ­ವಾಗಿ ನಡೆ­ದಿರು­ವುದು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಪರಾಕಾಷ್ಠೆ.   ಮೂಢನಂಬಿಕೆಗಳನ್ನು ತೊಲಗಿಸಲು ನಿರಂತರ ಜನಜಾಗೃತಿಯೇ ಮದ್ದು. ಉತ್ತಮ ಶಿಕ್ಷಣ, ದುಡಿಯುವ ಅವಕಾಶ ಹಾಗೂ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿಕೊಡುವ ಮೂಲಕ ಜನರು ಇಂತಹ ಮೂಢ ಆಚರಣೆ ಗಳಿಂದ ಹೊರಬರುವಂತೆ ಮಾಡಬಹುದು. ಈ ಕುರಿತಂತೆ ಸರ್ಕಾರ ನಿರಂತರ ಪ್ರಯತ್ನಗಳನ್ನು ಹಾಕಬೇಕು.  ಇದಕ್ಕೆ  ಇಚ್ಛಾಶಕ್ತಿ ಬೇಕು. ಇಂಥ ಆಚರಣೆ ಗಳನ್ನು ಇಲ್ಲವಾಗಿಸುವ ಹೊಣೆ ಸರ್ಕಾರದ್ದು ಮಾತ್ರವಲ್ಲ. ನಾಗರಿಕ ಸಮಾಜ ಹಾಗೂ ಸಂಘ–ಸಂಸ್ಥೆಗಳೂ  ಸರ್ಕಾರದೊಂದಿಗೆ ಕೈಜೋಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT