ತೃಣಮೂಲ ಕಾಂಗ್ರೆಸ್ ಸೃಷ್ಟಿಸಿರುವ ಬಿಕ್ಕಟ್ಟು ಇನ್ನೂ ಇತ್ಯರ್ಥ ಕಾಣದಿರುವ ಈ ಸಂದರ್ಭದಲ್ಲಿಯೇ ಕೇಂದ್ರದ ಯುಪಿಎ ಸರ್ಕಾರಕ್ಕೆ ಡಿಎಂಕೆ ಹೊಸ ತಲೆನೋವು ತಂದಿದೆ.
ಇದೀಗ ಕೇಂದ್ರದ ಮುಂದೆ ಧುತ್ತನೆ ಬಂದೆರಗಿರುವ ಸಮಸ್ಯೆ ಶ್ರಿಲಂಕಾ ತಮಿಳರಿಗೆ ಸಂಬಂಧಿಸಿದ್ದು. ಎಲ್ಟಿಟಿಇ ವಿರುದ್ಧ ಶ್ರಿಲಂಕಾ ಮಿಲಿಟರಿ 2009ರಲ್ಲಿ ನಡೆಸಿದ ಕೊನೆಯ ಹಂತದ ಯುದ್ಧದಲ್ಲಿ ತಮಿಳರನ್ನು ಅಮಾನುಷವಾಗಿ ಕೊಲ್ಲುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎನ್ನುವುದು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳ ಆರೋಪ.
ಈ ಆರೋಪಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸುವ ಅಮೆರಿಕದ ನಿರ್ಣಯವೊಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಇದೇ ಬುಧವಾರ ಚರ್ಚೆಗೆ ಬರಲಿದೆ.
ಈ ನಿರ್ಣಯದ ಪರ ಭಾರತ ಮತ ಹಾಕಬೇಕು ಎಂದು ಯುಪಿಎ ಸರ್ಕಾರದ ಅಂಗಪಕ್ಷವಾಗಿರುವ ಡಿಎಂಕೆ ಒತ್ತಾಯಿಸುತ್ತಿದೆ. ನಿರ್ಣಯದ ಪರ ಮತನೀಡದಿದ್ದರೆ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲವನ್ನು ಪುನರ್ ಪರೀಶೀಲಿಸಲಾಗುವುದು ಎಂದು ಅದು ಬೆದರಿಕೆ ಹಾಕಿದೆ.
ಡಿಎಂಕೆ ಶ್ರಿಲಂಕಾ ತಮಿಳರ ಹಕ್ಕುಗಳಿಗಾಗಿ ಹೋರಾಟಮಾಡುತ್ತಿದ್ದ ಎಲ್ಟಿಟಿಇಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿತ್ತು. ತಮಿಳುನಾಡಿನಲ್ಲಿ ಶ್ರಿಲಂಕಾ ತಮಿಳರ ಸಮಸ್ಯೆ ಪ್ರಬಲ ರಾಜಕೀಯ ಅಸ್ತ್ರ. ಭಾವೋದ್ರೇಕದ ವಿಚಾರ. ಆದರೆ ಕಾಂಗ್ರೆಸ್ನ ಪರಿಸ್ಥಿತಿ ತದ್ವಿರುದ್ಧವಾದುದು.
ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ ರಾಜೀವ್ ಗಾಂಧಿ ಅವರನ್ನೇ ಎಲ್ಟಿಟಿಇ ಹತ್ಯೆಮಾಡಿತು. ಈ ಹಿನ್ನೆಲೆಯಲ್ಲಿ ಎಲ್ಟಿಟಿಇಯನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ.
ಅಷ್ಟೇ ಅಲ್ಲ ಭಯೋತ್ಪಾದನೆ ವಿರುದ್ಧದ ವಿಶ್ವದ ಹೋರಾಟಕ್ಕೆ ಭಾರತ ಬೆಂಬಲ ನೀಡಿದೆ. ಆದರೆ ಈಗ ಭಯೋತ್ಪಾದನಾ ಸಂಘಟನೆ ಎಲ್ಟಿಟಿಇಯನ್ನು ಸದೆಬಡಿದ ಲಂಕಾ ಮಿಲಿಟರಿ ವಿರುದ್ಧವೇ ತನಿಖೆ ನಡೆಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಬೆಂಬಲಿಸಬೇಕಾದ ವಿಚಿತ್ರ ಪರಿಸ್ಥಿತಿಯನ್ನು ಸರ್ಕಾರ ಎದುರಿಸಬೇಕಾಗಿದೆ.
ಸಮಸ್ಯೆ ತುಂಬಾ ಜಟಿಲವಾದುದು. ಕಾಶ್ಮೀರ ಮತ್ತು ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಸೇನೆ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆಯೂ ತನಿಖೆ ನಡೆಸಬೇಕೆಂಬ ಒತ್ತಾಯ ಬಹಳ ಕಾಲದಿಂದ ಇದೆ.
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಮುಂದೆ ಬರಲಿರುವ ನಿರ್ಣಯಕ್ಕೆ ಬೆಂಬಲ ನೀಡಿದರೆ ಭಾರತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆಯೂ ಅಂತರರಾಷ್ಟ್ರೀಯ ಮಟ್ಟದ ತನಿಖೆಗೆ ಒಪ್ಪಿಗೆ ನೀಡಬೇಕಾಗುತ್ತದೆ.
ಇದನ್ನೆಲ್ಲಾ ಲೆಕ್ಕಹಾಕುತ್ತ ನಿರ್ಣಯಕ್ಕೆ ಬೆಂಬಲ ನೀಡದಿದ್ದರೆ ಡಿಎಂಕೆ ಕುಪಿತಗೊಂಡು ಬೆಂಬಲ ವಾಪಸ್ ಪಡೆಯಬಹುದು. ಸರ್ಕಾರ, ಡಿಎಂಕೆ ಬೆಂಬಲ ಮತ್ತು ತನ್ನ ಘೋಷಿತ ನೀತಿ ಎರಡನ್ನೂ ಉಳಿಸಿಕೊಳ್ಳುವುದು ಕಷ್ಟ.
ಹೀಗಾಗಿ ನಿರ್ಣಯವನ್ನು ಮತಕ್ಕೆ ಹಾಕುವಂತಹ ಸ್ಥಿತಿಗೆ ತೆಗೆದುಕೊಂಡು ಹೋಗದೆ ರಾಜತಾಂತ್ರಿಕ ಮಾರ್ಗವೊಂದನ್ನು ಕಂಡುಹಿಡಿಯಲು ಭಾರತ ಯತ್ನಿಸಬೇಕು. ಶ್ರಿಲಂಕಾ ತಮಿಳರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಪ್ರಾಮಾಣಿಕವಾಗಿ ಕೆಲಸಮಾಡದಿರುವುದೇ ಈ ಬಿಕ್ಕಟ್ಟಿಗೆ ಕಾರಣ.
ಆ ದಿಸೆಯಲ್ಲಿ ಶ್ರಿಲಂಕಾ ತಮಿಳರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಂಥ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಭಾರತದ ಮಾದರಿಯಲ್ಲಿ ಸ್ವಯಂಪ್ರೇರಿತವಾಗಿ ಕ್ರಮತೆಗೆದುಕೊಳ್ಳುವಂಥ ಬದ್ಧತೆಯನ್ನು ಅಲ್ಲಿನ ಸರ್ಕಾರ ಪ್ರದರ್ಶಿಸುವಂತೆ ಮಾಡಬೇಕು. ಅದರ ಉಸ್ತುವಾರಿಯನ್ನು ಶ್ರೀಲಂಕಾದ ಸ್ವತಂತ್ರ ಸಂಸ್ಥೆಯೊಂದಕ್ಕೆ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.