ADVERTISEMENT

ವಾಗ್ವಾದ ಉನ್ನತವಾಗಿರಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ನರೇಂದ್ರ ಮೋದಿಯವರನ್ನು ಟೀಕಿಸಲು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ನಪುಂಸಕ ಪದ ಬಳಕೆ ಮಾಡಿ­ದ್ದಾರೆ. ನರೇಂದ್ರ ಮೋದಿ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ, ಗುಜರಾತ್‌ನಲ್ಲಿನ 2002ರ ಗಲಭೆ ನಿಯಂತ್ರಿಸುವಲ್ಲಿನ  ಆಡಳಿತ ವೈಫಲ್ಯ­ವನ್ನು ದೂಷಿಸುವುದಕ್ಕಾಗಿ   ಈ ಪದವನ್ನು ಖುರ್ಷಿದ್  ಬಳಸಿರುವುದು  ಕೀಳು ಅಭಿರುಚಿಯ ದ್ಯೋತಕ.

ಭಾರತದಲ್ಲಿ ರಾಜಕೀಯ ವಾಗ್ವಾದಗಳು ಎಷ್ಟರಮಟ್ಟಿಗೆ ಅಧೋಗತಿಗೆ ಇಳಿಯುತ್ತಿವೆ ಎಂಬುದನ್ನು ಇದು ಬಿಂಬಿಸು­ತ್ತದೆ. ತಾವೂ ನಪುಂಸಕರಲ್ಲ ಎಂಬುದನ್ನು ಖುರ್ಷಿದ್  ಸಾಬೀತುಪಡಿಸಲಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ  ಅವರು ಈ ವಿಚಾರವನ್ನು ಬೆಳೆಸಿ ಸವಾಲು ಹಾಕಿರುವುದು ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಖುರ್ಷಿದ್ ಮಾತುಗಳಿಗೆ ಬಿಜೆಪಿ ಸಹ  ತೀವ್ರ  ಪ್ರತಿಕ್ರಿಯೆ­ಗಳನ್ನು ನೀಡಿದೆ.  ತಮ್ಮ ಮಾತು ಸಮರ್ಥಿಸಿಕೊಳ್ಳಲು ಖುರ್ಷಿದ್ ನಡೆಸಿದ ಪ್ರಯತ್ನವೂ ಹಾಸ್ಯಾಸ್ಪದ.

ಆದರೆ  ಇಂತಹ ಅಭಿರುಚಿಹೀನ ಹೇಳಿಕೆಗಳಿಗೆ  ಬಿಜೆಪಿ ನಾಯಕರುಗಳೇನೂ ಹೊರತಾಗಿಲ್ಲ.  2004ರಲ್ಲಿ ಯಶವಂತ ಸಿನ್ಹಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು  ‘ಶಿಖಂಡಿ’ ಎಂದು ಕರೆದಿ­ದ್ದರು. ತೀರಾ ಇತ್ತೀಚೆಗೆ ಯೋಗ ಗುರು ಬಾಬಾ ರಾಮದೇವ್, ಪ್ರಧಾನಿ ಅವ­ರನ್ನು ‘ನಾಮರ್ದ್’ ಎಂದು ಟೀಕಿಸಿದ್ದರು. ಸ್ವತಃ ನರೇಂದ್ರ ಮೋದಿ ಅವರೂ ಸುನಂದಾ ಪುಷ್ಕರ್ ಅವರನ್ನು  ಶಶಿ ತರೂರ್ ಅವರ ‘ ₨ 50 ಕೋಟಿ  ಬೆಲೆಬಾಳುವ ಗರ್ಲ್ ಫ್ರೆಂಡ್’ ಎಂದು ಕರೆದಿದ್ದರು. 

  ಲಿಂಗ ಸಮಾ­ನ­ತೆಗೆ ಬೆಂಬಲ ಕೊಡುವ ಪ್ರಗತಿಪರರೆಂದು ಬಣ್ಣಿಸಿಕೊಳ್ಳುವ ಎಡ ಪಕ್ಷವೂ ರಾಜಕೀಯ ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಎಲುಬಿಲ್ಲದ ನಾಲಿಗೆಯನ್ನೇ ಹರಿಯ­ಬಿಟ್ಟಿದೆ.  ಸಿಪಿಎಂ ಸಂಸತ್ ಸದಸ್ಯರೊಬ್ಬರು ಈ ಹಿಂದೆ ಮಮತಾ ಬ್ಯಾನರ್ಜಿ ಅವರನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿದ್ದರು.

ಅಧಿಕಾರವನ್ನು ಪುರುಷತ್ವಕ್ಕೆ ತಳಕು ಹಾಕುವ ಈ ಪ್ರವೃತ್ತಿ ಹಿಂದಿನಿಂದಲೂ ನಡೆದು ಬಂದಿದೆ. ಇದರ ಬೇರಿರುವುದು ಪಿತೃಪ್ರಧಾನ ಸಂಸ್ಕೃತಿಯಲ್ಲಿ. ನಿರ್ಧಾರ ಕೈಗೊಳ್ಳಲಾಗದ ಸಂದರ್ಭಗಳಲ್ಲಿ ‘ಬಳೆ ತೊಟ್ಟ ಹೆಣ್ಣಿನಂತೆ’ ಎಂದು ಸಮೀಕರಿಸಿ ಕೇವಲವಾಗಿ ಮಾತನಾಡುವುದು ಮಾಮೂಲು. ರಾಷ್ಟ್ರ­ಈಗ  ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿದೆ.

ಇಂತಹ ಸಂದರ್ಭ­ದಲ್ಲಿ  ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಗಳ   ಕಾವೂ ಏರ ತೊಡ­ಗು­­ತ್ತದೆ.  ಆದರೆ ಪ್ರಚಾರ ಗಿಟ್ಟಿಸುವುದಕ್ಕಾಗಿ  ಪರಸ್ಪರ  ವೈಯಕ್ತಿಕ ನಿಂದನೆ­ಗಳ ಕೆಸರೆರಚಾಟಕ್ಕೆ  ರಾಜಕೀಯ ಪ್ರತಿಸ್ಪರ್ಧಿಗಳು ಇಳಿಯುವುದು ಪ್ರಬುದ್ಧ ರಾಜಕಾರಣದ ಲಕ್ಷಣವಂತೂ ಅಲ್ಲ.   

ರಚನಾತ್ಮಕ ಟೀಕೆ, ವಿಮರ್ಶೆಗಳಿಗೆ ಒತ್ತು ನೀಡುವ ಮೂಲಕ ಚರ್ಚೆಗಳನ್ನು ಹುಟ್ಟುಹಾಕುವುದು ಅಗತ್ಯ. ತಮ್ಮ ಬದುಕಿಗೆ ಸಂಬಂಧಪಡುವ ಎಷ್ಟೊಂದು ವಿಚಾರಗಳ ಬಗ್ಗೆ ರಾಜಕೀಯ ಅಭ್ಯರ್ಥಿಗಳ ನಿಲುವುಗಳೇನು ಎಂಬುದನ್ನು ತಿಳಿಯಲು ಮತದಾರರು ಉತ್ಸುಕ­ರಾಗಿರುತ್ತಾರೆ.

ಜನಪರವಾದ ಆಡಳಿತ ಹಾಗೂ ಅಭಿವೃದ್ಧಿ ವಿಚಾರ­ಗಳು  ಈ ಚರ್ಚೆಗಳಿಗೆ  ದಿಕ್ಸೂಚಿಯಾಗಬೇಕು. ಕೆರಳಿಸುವಂತಹ, ವೈಯಕ್ತಿಕ­ವಾಗಿ ಅವಹೇಳನ ಮಾಡುವ ಅಪನಿಂದೆಗಳಿಗೆ ಅವಕಾಶ ಇರಕೂಡದು ಎಂಬ ನೀತಿಸಂಹಿತೆಯನ್ನು ರಾಜಕೀಯ ಪಕ್ಷಗಳು ಪಾಲಿಸುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT