ADVERTISEMENT

ಕಲಾಪೋಷಣೆ- ಯಾರ ಹೊಣೆ?

ಚರ್ಚೆ

ಡಾ.ಕೆ.ಎಸ್.ಪವಿತ್ರ, ಮನೋವೈದ್ಯೆ
Published 13 ಆಗಸ್ಟ್ 2014, 19:30 IST
Last Updated 13 ಆಗಸ್ಟ್ 2014, 19:30 IST

ರಂಗಕರ್ಮಿ ಕೆ.ವಿ. ಅಕ್ಷರ ಅವರು ಕೇಂದ್ರ ಸರ್ಕಾ­ರದ ಸಂಸ್ಕೃತಿ ಸಚಿವಾಲಯದ ಇತ್ತೀ­ಚಿನ ಬೆಳವಣಿಗೆಗಳ ಕುರಿತಾಗಿ ಬರೆದಿರುವ ಲೇಖನ (ಸಂಗತ ಆ.11) ಸಮಾನ ದುಃಖಿಗ­ಳಾದ ಹಲವು ಕಲಾವಿದರ ಆತಂಕವನ್ನು ಹೊರತಂದಿದೆ. ಸಂಸ್ಕೃತಿ ಸಚಿವಾಲಯ ಕಳೆದ ಐದು  ವರ್ಷ­ಗ­ಳಿಂದ ತಕ್ಕಮಟ್ಟಿಗೆ  ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಫಲವಾಗಿತ್ತು.

ಅದರ ಲಾಭ ಪಡೆ­ಯಲು ಎಷ್ಟು ಅರ್ಹ ಕಲಾವಿದರಿಗೆ ಅಥವಾ ಕಲಾತಂಡಗಳಿಗೆ ಸಾಧ್ಯವಾಗಿತ್ತು ಎಂಬ ಮಾತು ಬೇರೆ. ಆದರೆ ತಾಂತ್ರಿಕವಾಗಿ ಸರಿಯಾದ ದಾಖ­ಲೆ­ಗಳಿದ್ದಲ್ಲಿ, ಸಕಾಲಕ್ಕೆ ಅನುದಾನ–ಶಿಷ್ಯವೇತನದ ಹಣ ತಲುಪದಿದ್ದರೂ, ಮೊದಲನೇ ಅಥವಾ ಎರ­ಡನೇ  ವರ್ಷದ  ಕೊನೆಯಲ್ಲಿ ನೇರವಾಗಿ ಕಲಾ­ವಿ­ದರ ಅಥವಾ ಕಲಾತಂಡಗಳ ಬ್ಯಾಂಕ್ ಖಾತೆಗೇ  ಹಣ ಸಂದಾಯ ಆಗುತ್ತಿತ್ತು.

ನನ್ನಂಥ ಕಲಾವಿ­ದರು ಮತ್ತು ಹಲವಾರು ಕಲಾತಂಡಗಳು ಈ ಅನು­ದಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದುದು, ಸರ್ಕಾರಿ ಅಧಿ­ಕಾರಿಗಳಿಗೆ ಸಲಾಮು ಹೊಡೆಯದೇ, ಲಂಚ ತಿನ್ನಿ­ಸದೇ ಅಂತರ್ಜಾಲ ತಾಣದ ಮೂಲಕ ನೇರ­ವಾಗಿ ಅರ್ಜಿ ಪಡೆದು, ಸಲ್ಲಿಸಿ ಗೌರವದಿಂದ, ‘ಸಂಸ್ಕೃತಿ’ಗೇ ಸಂಬಂಧಿಸಿದ ಅನುದಾನವನ್ನು ಅರ್ಹತೆಯ ಆಧಾರದ ಮೇಲೆ ಪಡೆಯುವ ದಾರಿ ಇದು ಎಂಬ ಕಾರಣಕ್ಕೆ.

ಸಲ್ಲಿಸುವ ಎಲ್ಲ ಅರ್ಜಿಗಳೂ ವಿಷಯತಜ್ಞರ ಸಮಿ­ತಿಯಿಂದ ಪರಿಶೀಲನೆಗೆ ಒಳಪಟ್ಟು, ಸಕಾರ­ಣಗಳೊಂದಿಗೆ ಅನುದಾನ ನೀಡಬೇಕೇ -ಬೇಡವೇ ಎಂದು ತೀರ್ಮಾನ ಆಗುತ್ತಿದ್ದವು.  ವೇತನ ಅನು­ದಾ­ನದ ಸಂಸ್ಥೆಗಳನ್ನು ಕಳೆದ ಮೂರು ವರ್ಷ­ಗ­ಳಿಂದ ಕಡ್ಡಾಯವಾಗಿ ಪರಿಶೀಲನಾ ಭೇಟಿಗೆ ಒಳಪಡಿಸಲಾಗುತ್ತಿತ್ತು. 

ಈ ಎಲ್ಲಾ ಕ್ರಮ-ಯೋಜನೆಗಳೂ ವ್ಯವಸ್ಥಿತ­ವಾಗಿ ರೂಪುಗೊಂಡ ಕಾರಣದಿಂದ, ಹೆಚ್ಚು ಹೆಚ್ಚು ಕಲಾವಿದರು ತಮ್ಮ ಅರ್ಜಿಗಳನ್ನು ಈ ತನಕ ಸಲ್ಲಿಸುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಎಲ್ಲಾ ಯೋಜನೆಗಳನ್ನು ವಿವಿಧ ಅಂಗಸಂಸ್ಥೆಗಳ ನಿರ್ವ­ಹಣೆಗೆ  ವಹಿಸಲು ತೀರ್ಮಾನಿಸಲಾಗಿದೆ. ನೇರ­ವಾಗಿ ಅರ್ಜಿಗಳನ್ನು ಈ ಸಂಸ್ಥೆಗಳಿಗೇ ಕಳುಹಿ­ಸ­ಬೇಕು ಎಂದೂ ಸೂಚಿಸಲಾಗಿದೆ.

ಈಗಾಗಲೇ ಕಳಿ­ಸಿ­ರುವ ಅರ್ಜಿಗಳ ಬಗ್ಗೆ ಯಾವುದೇ ಸೂಚನೆ­ಯಿಲ್ಲ. ಈ ಮಧ್ಯೆ ಸಂಸ್ಕೃತಿ ಸಚಿವಾಲಯದ ಇಡೀ ಚಟು­ವಟಿಕೆಯೇ ಬೇರೊಂದು ಕಟ್ಟಡಕ್ಕೆ ಸ್ಥಳಾಂ­ತ­ರಗೊಂಡಿದೆ. ಆದರೆ ಈ ಬಗ್ಗೆ ಕಲಾವಿದರಿಗೆ ಮತ್ತು ಸಂಸ್ಥೆಗಳಿಗೆ ಯಾವುದೇ ಮಾಹಿತಿಯಿಲ್ಲ.
ಸಚಿವಾಲಯಕ್ಕೆ ಸಲ್ಲಿಸುವ ಅರ್ಜಿಗಳಿಗೆಲ್ಲ ಆಯಾ ರಾಜ್ಯ ಸರ್ಕಾರದ ಅಕಾಡೆಮಿ–ಸಂಸ್ಕೃತಿ ಇಲಾ­ಖೆಗಳ ಶಿಫಾರಸು ಕಡ್ಡಾಯ. ಗ್ರಾಮೀಣ ಕಲಾವಿದರಿಗೆ ಮತ್ತು ವಿವಿಧ ಕಾರಣಗಳಿಂದ ಈ ಶಿಫಾ­ರಸಿನ ಕಷ್ಟ, -ಅಡ್ಡಿ-, ಆತಂಕಗಳನ್ನು ಮನ­ಗಂಡು ಕಳೆದ ಬಾರಿಯ  ಪರಿಣತ ಸಮಿತಿ ಈ ಶಿಫಾ­ರಸನ್ನು ‘ಕಡ್ಡಾಯ’ ಎಂಬ ಅಂಶದಿಂದ ಕೈಬಿ­ಡ­ಬೇಕೆಂದು ಸೂಚಿಸಿತ್ತು.

ಈ ಸೂಚನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈಗ ‘ವಿಕೇಂದ್ರೀಕ-­ರಣ’ದ ಹೆಸರಿನಲ್ಲಿ ಯಾರೂ ‘ಹೊಣೆ ಹೊತ್ತು­ಕೊ­ಳ್ಳದ’ ಅರ್ಜಿಗಳ ಬಗ್ಗೆ ಯಾರನ್ನು, ಎಲ್ಲಿ ವಿಚಾ­ರಿಸಬೇಕೆಂದು ತಿಳಿಯದ ಅರಾಜಕತ್ವ ಉದ್ಭವಿಸುವ ಸಾಧ್ಯತೆಯೇ ಹೆಚ್ಚು. ಸಂಸ್ಕೃತಿ ಸಚಿವಾಲಯದ ಅನುದಾನವನ್ನು ಪಡೆ­ಯಲು ಸಂಸ್ಥೆಯ  ನೋಂದಣಿ, ಸರಿಯಾದ ಲೆಕ್ಕ­ಪತ್ರ, ಉತ್ತಮ ಕಾರ್ಯಕ್ರಮ ಯೋಜನೆ,  ಅನು­ದಾನದ ಉತ್ತಮ ನಿರ್ವಹಣೆ ಇವು ಕಡ್ಡಾ­ಯವಾಗಿತ್ತು. ಅಧಿಕಾರಿಗಳ ಪರಿಚಯ­ವಿರ­ದಿ­ದ್ದರೂ, ದೆಹಲಿಗೆ ಒಮ್ಮೆಯೂ ಹೋಗದೆಯೂ ಸಂಸ್ಥೆ­­ಗಳು ಅನುದಾನ ಪಡೆಯುತ್ತಿದ್ದವು. ಅನು­ದಾನ ಪಡೆಯುವುದು ಕಾರ್ಯಕ್ರಮದ ಗುಣ­ಮಟ್ಟದ ಗುರುತು ಎಂದೂ ಎನಿಸುತ್ತಿತ್ತು.

ಇವೆಲ್ಲವೂ ಹೊಸ ಬದಲಾವಣೆಗಳ  ನಂತ­ರವೂ ಮುಂದುವರೆಯಬಹುದು. ಆದರೆ ಹೊಸ ಕಚೇ­ರಿಗಳು ಹೊಸ ಜವಾಬ್ದಾರಿಗಳನ್ನು ನಿರ್ವಹಿ­ಸುವಲ್ಲಿ ಆತಂಕಗಳು-ಅಡ್ಡಿಗಳು-ತಪ್ಪುಗಳು ನುಸು­ಳುವ ಸಾಧ್ಯತೆ ಹೆಚ್ಚು. ಇಂಥ ಸಾಧ್ಯತೆಗಳನ್ನು ಗಮನ­ದಲ್ಲಿರಿಸಿಕೊಂಡು ಸಂಸ್ಕೃತಿ ಸಚಿವಾಲಯ ಕಲಾವಿದರ ಅಂದರೆ ಕಲೆಯ ಉನ್ನತಿಗಾಗಿ ಅವಕಾಶಗಳನ್ನು ಕಲ್ಪಿಸಲಿ ಎಂದು ಆಶಿಸೋಣ.

ಸಾಹಿತ್ಯ ಜಗತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಚರ್ಚೆ ನಡೆದಷ್ಟು ನೃತ್ಯ,- ಸಂಗೀತ,- ನಾಟಕ ಕ್ಷೇತ್ರ­ಗಳ ಸಮಸ್ಯೆಗಳು ಚರ್ಚೆಯಾಗುವುದಿಲ್ಲ. ಸಿನಿಮಾ ಹಿನ್ನೆಲೆಯಿರದ, ಆದರೆ  ಅತಿ ಪ್ರಸಿದ್ಧ ಕಲಾ­ವಿದರು ಅತ್ಯಂತ ಶ್ರಮ, -ಅರ್ಹತೆಗಳ ನಡು­ವೆಯೂ ಇಲಾಖೆಯಿಂದ  ಪಡೆಯಬಹುದಾದ  ಹಾಗೂ ಒಂದು ಕಾರ್ಯಕ್ರಮಕ್ಕೆ ಪಡೆಯುವ ಸಂಭಾ­ವನೆ ಸುಮಾರು ₨೨ ಲಕ್ಷ. ಇದರ ಹಿಂದೆ ವರ್ಷಗಳ ಸಾಧನೆಯೊಂದಿಗೆ ೨ ಗಂಟೆಗಳ ಕಾಲ ಒಂದೇ ಸಮ ಹಾಡುವ, ನರ್ತಿಸುವ ಬೌದ್ಧಿಕ -ದೈಹಿಕ -ಮಾನಸಿಕ ಶ್ರಮವೂ ಸೇರಿರುತ್ತದೆ ಎಂಬು­ದನ್ನೂ ನೆನಪಿನಲ್ಲಿಟ್ಟು­ಕೊಳ್ಳ­ಬೇಕು.

ಈ ಸಂಭಾ­ವನೆ ಸಿನಿಮಾ ಕಲಾವಿದರಿಗೆ, ಪಾಪ್ ಸಂಗೀತ ಕಲಾವಿದರಿಗೆ ಹೋಲಿಸಿ ನೋಡಿದರೆ ಅತ್ಯಂತ ಕಡಿಮೆ.  ಇಂದು ಒಂದು  ಹಿನ್ನೆಲೆ ಸಂಗೀತವನ್ನು ಹೊಂದಿದ ನೃತ್ಯ ಕಾರ್ಯಕ್ರಮಕ್ಕೆ ಇಡೀ ತಂಡಕ್ಕೆ ₨೫೦,೦೦೦ ತಲುಪಿದರೆ ಅದು ಹೆಚ್ಚು! ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಅಥವಾ ಕೇಂದ್ರದ ಸಂಸ್ಕೃತಿ ಸಚಿವಾಲಯ ಯಾವುದೇ ದಿಢೀರ್ ಬದಲಾವಣೆಗಳನ್ನು ಮಾಡುವ ಮೊದಲು ಕೂಲಂಕಷವಾಗಿ ಪರಿಸ್ಥಿತಿಯನ್ನು ಅವ­ಲೋ­ಕಿಸಿ, ಸಾಂಸ್ಕೃತಿಕ ರಾಯಭಾರಿಗಳಾದ ಕಲಾ­ವಿ­ದರ ಅಭಿಪ್ರಾಯ  ಕೇಳುವುದು ಅಗತ್ಯ.

ಅಥವಾ ಮಾಡಿರುವ ಬದಲಾವಣೆಯ ಸಂಪೂರ್ಣ ವಿವರಣೆ, ಮಾರ್ಗಸೂಚಿ ಮತ್ತು ಎಲ್ಲಾ ಕಲಾವಿದರಿಗೆ (ವಿಶೇಷವಾಗಿ ದೊಡ್ಡ ನಗ­ರಗಳ ಹೊರಗಿರುವ ಅರ್ಹ ಕಲಾವಿದರು ಮತ್ತು ಕಲಾ­ತಂಡಗಳು) ಅರ್ಜಿ ಸಲ್ಲಿಸಲು ಸುಲ­ಭ­ವಾ­ಗು­ವಂತೆ ಮಾರ್ಗದರ್ಶನ ನೀಡಬೇಕಾದ್ದು ಅತ್ಯವಶ್ಯ.

ಇದರೊಂದಿಗೆ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆ ಅನುದಾನದ ಹೊಸ ಮಾರ್ಗಸೂಚಿ- ಅರ್ಜಿ­ಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಗೀತ-, ನೃತ್ಯ ಪರೀಕ್ಷೆಗಳು ಪ್ರತಿವರ್ಷವೂ ಸಂಗೀತ ವಿಶ್ವವಿದ್ಯಾಲಯ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ  ಜಗ್ಗಾಟದಲ್ಲಿ ಭವಿಷ್ಯದ ಖಚಿತತೆಯಿಲ್ಲದೆ ಹೇಗೋ ಸಾಗುತ್ತಿವೆ.

ಕಲಾ­ಜಗತ್ತನ್ನು ನಿರಾತಂಕವಾಗಿರಿಸಿ ಉತ್ತಮ ಕಲೆ ಸೃಷ್ಟಿ­ಸಲು ಎಲ್ಲ ಅವಕಾಶಗಳನ್ನು ಕಲ್ಪಿಸುವ ಸಂದ-ರ್ಭವನ್ನು ನಿರ್ಮಾಣ ಮಾಡುವ ಹೊಣೆ ಯಾರದ್ದು? ಎಂಬ ಪ್ರಶ್ನೆಯನ್ನು ಕಲಾವಿದ ಎದುರಿಸುತ್ತಿರುವುದು ಕಲೆಯ ದುರಂತವೋ ಅಥವಾ ಸಮಾಜದ ದುರಂತವೋ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.