‘ಪ್ರಥಮ ದಾಳಿ ಇಲ್ಲ’: ಸಲಹೆ ಪರಿಶೀಲಿಸುವಂತೆ ಪಾಕ್ಗೆ ಭಾರತ ಮನವಿ
ನವದೆಹಲಿ, ಆ. 24 (ಯುಎನ್ಐ)– ಉಭಯ ದೇಶಗಳ ನಡುವೆ ಸಮಗ್ರ ಮತ್ತು ಅರ್ಥಪೂರ್ಣ ಮಾತುಕತೆಗೆ ತಳಹದಿ ನಿರ್ಮಿಸುವ ಸಲುವಾಗಿ ‘ಪ್ರಥಮ ದಾಳಿ ಇಲ್ಲ’ ಎಂಬ ತನ್ನ ಸಲಹೆಯನ್ನು ಪ್ರಾಮಾಣಿಕ ಉದ್ದೇಶದಿಂದ ಪರಿಶೀಲಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತು.
ಈ ಸಲಹೆಗೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಆರ್.ಎಲ್. ಭಾಟಿಯ ಅವರು ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯಸಭೆಗೆ ತಿಳಿಸಿದರು.
ಅಣುಬಾಂಬ್ ಭಾರತ ಆತಂಕ
ನವದೆಹಲಿ, ಆ. 24 (ಪಿಟಿಐ)– ದ್ವಿಪಕ್ಷೀಯ ಸಂಬಂಧಗಳಿಗೆ ತೀವ್ರ ಬೆದರಿಕೆಯೊಡ್ಡುವ ಪಾಕಿಸ್ತಾನದ ಅಣು ಬಾಂಬ್ ತಯಾರಿಕೆ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದ್ದು, ದೇಶದ ಆಂತರಿಕ ಭದ್ರತೆಗೆ ‘ಎಲ್ಲಾ ಅಗತ್ಯ ಕ್ರಮ’ ಕೈಗೊಳ್ಳುವುದಾಗಿ ಪ್ರಕಟಿಸಿದೆ. ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಸಫಲವಾಗಿದೆ ಹಾಗೂ ಯಾವುದೇ ಸಂದರ್ಭ
ದಲ್ಲಿ ಈ ಅಣುಬಾಂಬ್ ಬಳಸಲು ಅದು ಸಜ್ಜುಗೊಂಡಿದೆ ಎಂಬ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆಯಿಂದ ಭಾರತ ದಿಗ್ಭ್ರಮೆಗೊಂಡಿದೆ ಎಂದು ವಿದೇಶಾಂಗ ವ್ಯವಹಾರ ಖಾತೆ ವಕ್ತಾರರೊಬ್ಬರು ತಿಳಿಸಿದ್ದಾರೆ.
ಕೋಲಾರ ಚಿನ್ನದ ಗಣಿಯಿಂದ ಚಿನ್ನ ಕಳ್ಳಸಾಗಣೆ
ಕೆಜಿಎಫ್, ಆ. 24– ಸರ್ಕಾರಿ ಸ್ವಾಮ್ಯದ ಕೋಲಾರ ಚಿನ್ನದ ಗಣಿಯಿಂದ ತಿಂಗಳೊಂದಕ್ಕೆ ಸುಮಾರು 10 ರಿಂದ 15 ಕಿ.ಜಿ. ಚಿನ್ನ ಕಳ್ಳಸಾಗಣೆ ಆಗುತ್ತಿದೆ ಎಂದು ಕೇಂದ್ರ ತನಿಖಾ ದಳ (ಸಿ.ಬಿ.ಐ) ತನ್ನ ವರದಿಯಲ್ಲಿ ತಿಳಿಸಿದೆ.
ಚಿನ್ನದ ಗಣಿಯಲ್ಲಿ ಹೆಚ್ಚುತ್ತಿರುವ ಚಿನ್ನದ ಕಳ್ಳಸಾಗಣೆ ಬಗ್ಗೆ ಸಂಸದೀಯ ಉಪ ಸಮಿತಿ ತನ್ನ ವರದಿಯಲ್ಲಿ ತಿಳಿಸಿದ್ದು, ಈ ವರದಿಯ ಮೇರೆಗೆ ಕಳೆದ ಮೇ ತಿಂಗಳಿನಿಂದ ಇಲ್ಲಿಯೇ ಬಿಡಾರ ಹೂಡಿರುವ ಸಿಬಿಐ ತಂಡ ಕಳ್ಳಸಾಗಣೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಚಿನ್ನ ಸ್ವೀಕರಿಸುವ ಖಾಸಗಿ ವ್ಯಾಪಾರಸ್ಥರ ಬಗ್ಗೆ ವಿವರವಾದ ವರದಿಯನ್ನು ತನ್ನ ಉನ್ನತಾಧಿಕಾರಿಗಳಿಗೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.