ADVERTISEMENT

25 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:04 IST
Last Updated 29 ಜೂನ್ 2019, 19:04 IST

ಕೃಷ್ಣಾ ಯೋಜನೆ ಎರಡನೇ ಹಂತಕ್ಕೂ ವಿಶ್ವಬ್ಯಾಂಕ್ ನೆರವು

ಬೆಂಗಳೂರು, ಜೂನ್ 29– ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ ವಿಶ್ವಬ್ಯಾಂಕ್ ಒಂಬೈನೂರು ಕೋಟಿ ರೂಪಾಯಿ ನೆರವು ನೀಡಲು ಒಲವು ತೋರಿಸಿದೆ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ನುಡಿದರು.

ಅಮೆರಿಕಾ ಪ್ರವಾಸದಿಂದ ಹಿಂದಿರುಗಿದ ಮುಖ್ಯಮಂತ್ರಿಗಳು ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕೃಷ್ಣಾ ಜಲ ನಿಗಮ ರಚನೆ ಮುಂತಾದ ಕ್ರಮ ಕೈಗೊಂಡಿರುವುದನ್ನು ಕೇಳಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಟರ್ನ್ ಅವರು ಮತ್ತಷ್ಟು ನೆರವು ನೀಡಲು ಆಸಕ್ತಿ ತೋರಿದ್ದಾರೆ ಎಂದು ವಿವರಿಸಿದರು.

ADVERTISEMENT

ಮಾಸ್ಕೋದಲ್ಲಿ ಪಿವಿಎನ್‌ಗೆ ಹಾರ್ದಿಕ ಸ್ವಾಗತ

ಮಾಸ್ಕೊ, ಜೂನ್ 29 (ಪಿಟಿಐ)– ರಷ್ಯಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿ ಸಲುವಾಗಿ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿಗೆ ಆಗಮಿಸಿದರು.

ರಾವ್ ಅವರನ್ನು ರಷ್ಯದ ಪ್ರಧಾನಿ ವಿಕ್ಟರ್ ಚೆನ್ನೋಮಿರ್ಡಿಸ್ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಇಲ್ಲಿನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳೂ ರಾವ್ ಅವರಿಗೆ ಸ್ವಾಗತ ಕೋರಿದರು.

ದಳ ಮತ್ತೆ ವಿಭಜನೆ: ಹೆಗಡೆ ಮುನ್ಸೂಚನೆ

ನವದೆಹಲಿ, ಜೂನ್ 29– ಜನತಾದಳದ ವಿಭಜನೆಯಿಂದ ಕರ್ನಾಟಕ ದಳ ಘಟಕದ ಮೇಲೆ ಯಾವುದೇ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ಜನತಾದಳದ ಮುಖಂಡರಾದ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ದಳ ಇಬ್ಭಾಗವಾಗುವ ‘ಕಥೆ’ ಇನ್ನೂ ಮುಗಿದಿಲ್ಲ, ಅದು ಪುನಃ ಒಡೆಯುವ ಸೂಚನೆಗಳಿಗೆ ಎಂದು ಮಾಜಿ ಮುಖ್ಯಮಂತ್ರಿ ಹೆಗಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ನವಂಬರ್‌ನಲ್ಲಿ ಉತ್ತರದಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ದಳದ ಪುನರ್ ಸಂಘಟನೆ ಅಗತ್ಯವಿತ್ತು ಎಂದ ಅವರು ಜುಲೈ 29 ಹಾಗೂ 30 ರಂದು ನಡೆಯುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯ ನಂತರ ಪಕ್ಷ ಪುನಃ ಹೋಳಾಗಬಹುದು ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.