18 ಕಿರಿಯ ಕೃಷಿ ಅಧಿಕಾರಿಗಳ ಸಸ್ಪೆಂಡ್
ಬೆಂಗಳೂರು, ನ. 16– ರಾಜ್ಯದಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿ ವ್ಯಾಪ್ತಿಗೆ ಬರುವ ನಾನಾ ಯೋಜನೆಗಳಿಗೆ 1990–91ರಿಂದ ಇಲ್ಲಿಯವರೆಗೆ ಆಗಿರುವ ಖರ್ಚು–ವೆಚ್ಚ ಮತ್ತು ಪ್ರಗತಿ ಕುರಿತು ನಿಗದಿತ ಅವಧಿಯೊಳಗೆ ವರದಿ ಕಳುಹಿಸಿ ಕೊಡದ 16 ಮಂದಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇಬ್ಬರು ಉಪ ನಿರ್ದೇಶಕರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಕೃಷಿ ಸಚಿವ ಸಿ. ಬೈರೇಗೌಡ ಅವರು ಈ ವಿಷಯವನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ, ಈ ಯೋಜನೆಗಳ ಬಗ್ಗೆ ಈಗಾಗಲೇ ಕೆಲವು ಮಂದಿ ಕೃಷಿ ಅಧಿಕಾರಿಗಳು ಕಳುಹಿಸಿ ರುವ ವರದಿಗಳು ಎಷ್ಟು ಕರಾರುವಕ್ಕಾಗಿವೆ ಎಂಬುದನ್ನು ಪರಿಶೀಲಿಸಲು ವಿವಿಧ ಇಲಾಖೆ ಗಳಿಗೆ ಸೇರಿದ ಮೂವರು ಅಧಿಕಾರಿಗಳ ತನಿಖಾ ಸಮಿತಿ ರಚಿಸಲಾಗುವುದು ಎಂದರು.
‘ಸೌಂದರ್ಯ ಸ್ಪರ್ಧೆ: ವೃತ್ತಿ ಜೊತೆ ರಾಜಕೀಯ ಬೆರೆಸಲಾರೆ’
ಬೆಂಗಳೂರು, ನ. 16– ವಿಶ್ವಸುಂದರಿ ಸ್ಪರ್ಧೆಯನ್ನು ಬಲವಾಗಿ ವಿರೋಧಿಸುತ್ತಿರುವ ಸಂಘಟನೆಗಳಲ್ಲಿ ಬಿಜೆಪಿಯ ಮುಂಚೂಣಿ ಘಟಕಗಳಲ್ಲಿ ಒಂದಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಹ ಒಂದು. ಆದರೆ, ಎಬಿವಿಪಿಯ ಸಕ್ರಿಯ ಸದಸ್ಯರೂ ಅಗಿರುವ ಖ್ಯಾತ ಚಿತ್ರ ನಿರ್ದೇಶಕ ಪ್ರಿಯದರ್ಶನ್ ಅವರೇ ವಿಶ್ವಸುಂದರಿ ಸ್ಪರ್ಧೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಿರುವುದು ಹಲವರಿಗೆ ಹುಬ್ಬೇರಿಸುವಂತೆ ಮಾಡಿದೆ.
ಆದರೆ, ಈ ವಿಷಯದಲ್ಲಿ ‘ಕಾಲಾಪಾನಿ’ ಖ್ಯಾತಿ ಪ್ರಿಯದರ್ಶನ್ ಅವರಿಗೆ ಮಾತ್ರ ಯಾವುದೇ ರೀತಿಯ ವಿಷಾದವಾಗಲೀ, ಗೊಂದಲವಾಗಲೀ ಇಲ್ಲ. ‘ನಿರ್ದೇಶನ ಮಾಡುವುದು ನನ್ನ ವೃತ್ತಿ. ರಾಜಕೀಯವಾಗಿ ನನ್ನ ವೈಯಕ್ತಿಕ ಒಲವು ನಿಲುವುಗಳು ಏನೇ ಇದ್ದರೂ ಅವುಗಳನ್ನು ವೃತ್ತಿಯ ಜೊತೆ ಬೆರೆಸಲು ನಾನು ಇಚ್ಛಿಸುವುದಿಲ್ಲ’ ಎಂಬುದು ಅವರು ನೀಡುವ ಸ್ಪಷ್ಟ ಉತ್ತರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.