ಬೆಂಕಿ ತಗಲಿ ಕಾಂಗ್ರೆಸ್ ಅಧಿವೇಶನದ ಚಪ್ಪರ ಭಸ್ಮ
ನೇಕಿರಾಂನಗರ, ಏ. 25– ಕಾಂಗ್ರೆಸ್ಸಿನ 72ನೇ ಅಧಿವೇಶನಕ್ಕಾಗಿ ನಿರ್ಮಿಸಲಾಗಿದ್ದ ವರ್ಣರಂಜಿತ ವಿಶಾಲ ಚಪ್ಪರ ಇಂದು ಬೆಳಿಗ್ಗೆ ವಿಷಯ ನಿಯಾಮಕ ಸಮಿತಿಯ ಸಭೆ ಪ್ರಾರಂಭವಾದ ಸುಮಾರು ಒಂದು ಗಂಟೆಯ ನಂತರ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಯಿತು.
ಖಾದಿ ಬಟ್ಟೆ ಹಾಗೂ ಗೋಣಿತಟ್ಟಿನಿಂದ ನಿರ್ಮಿಸಲಾಗಿದ್ದ ಈ ಭವ್ಯ ಚಪ್ಪರಕ್ಕೆ ಬೆಂಕಿ ಬಿದ್ದಾಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಎಂ. ಭಕ್ತವತ್ಸಲಂ ಅವರೂ ಸೇರಿ ಆರು ಮಂದಿ ಗಾಯಗೊಂಡರು.
ವಿಷಯ ನಿಯಾಮಕ ಸಮಿತಿಯ ಬಹಿರಂಗ ಅಧಿವೇಶನವು ಮುಕ್ತಾಯದ ಘಟ್ಟದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿತು.
1,50,000 ಚದರಡಿ ಚಪ್ಪರದ ತುದಿಯಲ್ಲಿ ವೇದಿಕೆಯ ಮೂಲೆಯೊಂದರಲ್ಲಿ ಬೆಂಕಿ ತಲೆದೋರುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ, ಪ್ರಧಾನಿ ಇಂದಿರಾಗಾಂಧಿ ಅವರು ಇತರ ನಾಯಕರ ಜೊತೆ ಚಪ್ಪರದಿಂದ ಹೊರಗಡೆಗೆ ಓಡಿಬಂದರು.
ಆಗಿಬಾರದ ಸ್ಥಳ
ನೇಕಿರಾಂನಗರ, ಏ. 25– ದೆಹಲಿ ಮತ್ತು ಅದರ ಆಜುಬಾಜು ಪ್ರದೇಶ ಕಾಂಗ್ರೆಸ್ ಅಧಿವೇಶನಕ್ಕೆ ಯಾವಾಗಲೂ ಪ್ರಶಸ್ತವಲ್ಲ– ಅಧಿವೇಶನದಲ್ಲಿ ಭಾಗವಹಿಸಲು ಬಂದಿರುವ ಪ್ರತಿಯೊಬ್ಬರೂ ಬೆಂಕಿ ಅಪಘಾತದ ನಂತರ ತೆಗೆದ ಉದ್ಗಾರ ಇದು.
ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಸ್. ನಿಜಲಿಂಗಪ್ಪನವರು ಪ್ರತಿನಿಧಿಯ ಮಾತುಗಳನ್ನು ಸುದ್ದಿಗಾರರೊಬ್ಬರಿಗೆ ತಿಳಿಸಿ, ಕಾಂಗ್ರೆಸ್ ಅಧಿವೇಶನದ ಚಪ್ಪರಕ್ಕೆ ಬೆಂಕಿ ಬಿದ್ದಿರುವುದು ಇದು ಮೂರನೆ ಬಾರಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.