‘ಫಾಸಿಸ್ಟ್ ಪ್ರಭುತ್ವಕ್ಕೆ ಇಂದಿರಾ ಪ್ರಯತ್ನ’ ವಿರೋಧಕ್ಕೆ ಎಸ್ಸೆನ್ ಕರೆ
ಗಾಂಧಿನಗರ, ಡಿ. 21– ‘ಭಾರತದಲ್ಲಿ ಫಾಸಿಸ್ಟ್ ಆಡಳಿತ ವಿಧಿಸಲು ಉದ್ದೇಶ ಪೂರ್ವಕ ಪ್ರಯತ್ನ’ ನಡೆಸಿರುವುದಾಗಿ ವಿರೋಧಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಇಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ವಿರುದ್ಧ ಆರೋಪ ಹೊರಿಸಿ ‘ಜನತೆಯು ಪಕ್ಷಭೇದವಿಲ್ಲದೆ ಪ್ರಜಾತಂತ್ರದ ರಕ್ಷಣೆ ಮತ್ತು ಜಾತ್ಯತೀತ ಧೋರಣೆಯ ಪ್ರಾಬಲ್ಯಗಳಿಗಾಗಿ ಒಂದುಗೂಡಬೇಕು’ ಎಂದು ಇಲ್ಲಿ ತಮ್ಮ ಪಕ್ಷದ 73ನೆಯ ಪೂರ್ಣಾಧಿವೇಶನದಲ್ಲಿ ಕರೆಕೊಟ್ಟರು.
ಪ್ರಧಾನಿ ವಿರುದ್ಧದ ಅತ್ಯಂತ ಕಟು ಟೀಕೆಯೆಂದು ಕಂಡು ಬರುವ ತಮ್ಮ ಅಧ್ಯಕ್ಷ ಭಾಷಣದಲ್ಲಿ ಶ್ರೀ ನಿಜಲಿಂಗಪ್ಪ ಅವರು, ಶ್ರೀಮತಿ ಗಾಂಧಿಯವರು ಕಮ್ಯುನಿಸ್ಟರ ಜೊತೆಗೂಡಿದ್ದಾರೆಂದು ಆರೋಪಿಸಿ, ‘ಅವರ ಬೆಂಬಲ ಗಳಿಸಲು ಅವರು ಭಾರತದ ನೀತಿಗಳನ್ನು ರಷ್ಯಕ್ಕೆ ಒತ್ತೆ ಇಡಲು ಹಿಂಜರಿಯಲಿಲ್ಲ’ ಎಂದರು.
ಶ್ರೀಮತಿ ಗಾಂಧಿಯವರು ಫಾಸಿಸ್ಟ್ ಆಡಳಿತ ವಿಧಿಸಲು ಪ್ರಯತ್ನಿಸಿ ಜಾತಿಮತಗಳ ಭಾವನೆಗಳನ್ನು ಉತ್ತೇಜಿಸಿದ್ದಾರೆಂಬ ವಿರೋಧಾಭಾಸ ಆಪಾದನೆಯನ್ನೂ ಪಕ್ಷದ ಅಧ್ಯಕ್ಷರು ಅದೇ ಭಾಷಣದಲ್ಲಿ ಮಾಡಿದರು.
ಆರ್ಥಿಕ ನೀತಿಗೆ ಪ್ರಗತಿಪರ ತಿರುವು ನೀಡುವ ಹಲವರ ‘ದುರ್ಬಲ ಪ್ರಯತ್ನ’
ಗಾಂಧಿನಗರ, ಡಿ. 21– ಸಂಸ್ಥೆ ಕಾಂಗ್ರೆಸ್ಸಿನ 73ನೆ ಪೂರ್ಣಾಧಿವೇಶನದ ವಿಷಯನಿಯಾಮಕ ಸಮಿತಿಯು ಆರ್ಥಿಕ ಮತ್ತು ಸಾಮಾಜಿಕ ನೀತಿ ಕುರಿತ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಇಂದು ಅಂಗೀಕರಿಸಿತು.
ಒಂದು ಕಡೆ ಪಕ್ಷದ ಆರ್ಥಿಕ ನೀತಿಗೆ ಪ್ರಗತಿಪರಗೊಳಿಸಲು ಹಾಗೂ ಇನ್ನೊಂದು ಕಡೆ ಸಾಮಾನ್ಯವಿಮೆ ಮತ್ತು ವಿದೇಶಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಕರೆ ನೀಡಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಕ್ಕಿಸುವುದಕ್ಕೆ ಶ್ರೀ ಎಂ.ಎಸ್. ಗುರುಪಾದಸ್ವಾಮಿಯವರ ನೇತೃತ್ವದಲ್ಲಿ ಕೆಲವು ಸದಸ್ಯರು ದುರ್ಬಲ ಪ್ರಯತ್ನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.