ಇಂದಿರಾ ಸರ್ಕಾರ ಸುಭದ್ರ:ಕೆಂಗಲ್ ವಿವರಣೆ
ಮೈಸೂರು, ಫೆ. 1– ‘ಕೇಂದ್ರದಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ಸರ್ಕಾರವನ್ನು ಉರುಳಿಸಲು ವಿರೋಧ ಗುಂಪುಗಳವರಿಗೆ ಸಾಕಷ್ಟು ಸಂಖ್ಯೆಯ ಸಂಸತ್ ಸದಸ್ಯರ ಬೆಂಬಲವಿಲ್ಲ. ಆದುದರಿಂದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಸಂದೇಹವಿಲ್ಲ’ ಎಂದು ಶ್ರೀ ಕೆ.ಹನುಮಂತಯ್ಯ ಅವರು ಇಂದು ಇಲ್ಲಿ ತಿಳಿಸಿದರು.
ಪತ್ರಕರ್ತರ ಸಂಘದವರು ಏರ್ಪಡಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಹನುಮಂತಯ್ಯನವರು ಬರಲಿರುವ ಪಾರ್ಲಿಮೆಂಟ್ ಅಧಿವೇಶನ ಪ್ರಮುಖವಾದುದೆಂದರು.
ಹಿಂದೆಂದಿಗಿಂತ ಉತ್ತಮ ರೀತಿಯಲ್ಲಿ ಸಂಘಟಿತರಾಗಿರುವ ವಿರೋಧ ಗುಂಪುಗಳವರನ್ನು ಸರ್ಕಾರ ಎದುರಿಸಬೇಕಾಗುವುದುದೆಂದು ತಿಳಿಸಿದ ಶ್ರೀಯುತರು, ಸದಸ್ಯರ ಸಂಖ್ಯಾಬಲ ಮಾತ್ರದಿಂದಲೇ ಅಲ್ಲದೆ ಪಾರ್ಲಿಮೆಂಟಿನಲ್ಲಿ ಮಂತ್ರಿಗಳ ಶ್ರೇಷ್ಠ ದರ್ಜೆಯ ಕಾರ್ಯನಿರ್ವಹಣೆಯ ಮೂಲಕ ಇಂದಿರಾಗಾಂಧಿ ಅವರು ವಿರೋಧಿ
ಗಳನ್ನು ಎದುರಿಸಬೇಕೆಂದರು.
10ರೊಳಗೆ ಚಂಡೀಗಡ ನಿರ್ಧಾರ ತಿರಸ್ಕರಿಸಲು ಜನಸಂಘದ ಒತ್ತಾಯ
ಚಂಡೀಗಡ, ಫೆ. 1– ಪಂಜಾಬಿನ ಅಧಿಕಾರಾರೂಢ ಪಕ್ಷಗಳಾದ ಅಕಾಲಿದಳ ಮತ್ತು ಜನಸಂಘದ ನಡುವೆ ತೀವ್ರ ಒಡಕಿನ ಸೂಚನೆಗಳು ಬರುತ್ತಿವೆ. ಚಂಡೀಗಡ ಪ್ರಶ್ನೆ ಕುರಿತ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಇಡಿಯಾಗಿ’ ಫೆಬ್ರುವರಿ 10ರೊಳಗಾಗಿ ತಿರಸ್ಕರಿಸುವಂತೆ ಜನಸಂಘವು ಪಂಜಾಬ್ ಸರ್ಕಾರಕ್ಕೆ ಕೊನೆಯೆಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.