ಬ್ಯಾಂಕ್ ರಾಷ್ಟ್ರೀಕರಣ: ತುರ್ತು ಆಜ್ಞೆಗೆ ಸುಪ್ರೀಂ ಕೋರ್ಟ್ ತಡೆ
ನವದೆಹಲಿ, ಜುಲೈ 22– ರಾಷ್ಟ್ರದ ಹದಿನಾಲ್ಕು ಭಾರಿ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿ ಹೊರಡಿಸಿದ್ದ ರಾಷ್ಟ್ರಪತಿ ಸುಗ್ರೀವಾಜ್ಞೆಯನ್ನು ಜಾರಿಗೆ ತರುವುದಕ್ಕೆ ಸುಪ್ರೀಂ ಕೋರ್ಟ್ ಇಂದು ತಾತ್ಕಾಲಿಕ ತಡೆ ನೀಡಿತು.
ಬ್ಯಾಂಕ್ ರಾಷ್ಟ್ರೀಕರಣ ಸುಗ್ರೀವಾಜ್ಞೆಯ ರಾಜ್ಯಾಂಗ ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಎರಡು ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿತು.
ಸುಗ್ರೀವಾಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಈ ರಿಟ್ ಅರ್ಜಿಗಳನ್ನು ಆಗಸ್ಟ್ 11ರಂದು ವಿಚಾರಣೆಗೆ ತೆಗೆದು ಕೊಳ್ಳಲಾಗುವುದು. ಎಂಟು ಮಂದಿ ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟಿನ ಪೂರ್ಣಪೀಠ ತಡೆ ಆಜ್ಞೆ ಹೊರಡಿಸಿತು.
ತುರ್ತು ಆಜ್ಞೆಯ ಮುಖ್ಯ ವಿಧಿಗಳ ಮೇಲೆ ಯಾವ ಪರಿಣಾಮವೂ ಇಲ್ಲ– ಇಂದಿರಾ
ನವದೆಹಲಿ, ಜುಲೈ 22– ರಾಷ್ಟ್ರೀಕರಣಗೊಳಿಸಲ್ಪಟ್ಟ 14 ವಾಣಿಜ್ಯ ಬ್ಯಾಂಕುಗಳ ಮಾಲೀಕತ್ವವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದರ ಮೇಲೆ ಹಾಗೂ ಆ ಬ್ಯಾಂಕುಗಳ ಮಾಮೂಲಿನ ವಹಿವಾಟಿನ ಮೇಲೆ ಸುಪ್ರೀಂ ಕೋರ್ಟಿನ ತಡೆ ಆಜ್ಞೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.
ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಸಂಬಂ ಧಿಸಿದ ತುರ್ತು ಆಜ್ಞೆಯ ಮುಖ್ಯ ವಿಧಿಗಳ ಮೇಲೆ ಸುಪ್ರೀಂ ಕೋರ್ಟಿನ ಆಜ್ಞೆಯಿಂದ ಯಾವ ಪರಿಣಾಮವೂ ಉಂಟಾಗದೆಂದೂ ಅವರು ಹೇಳಿಕೆಯೊಂದನ್ನಿತ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.