ಪಕ್ಷಾಂತರ ತಡೆಗೆ ಶಾಸನ ತರಲು ಆಲೋಚನೆ: ಪಂತ್
ನವದೆಹಲಿ, ಮಾ. 29– ಪಕ್ಷಾಂತರವನ್ನುತಪ್ಪಿಸುವುದಕ್ಕಾಗಿ ಸಂಸತ್ ಮುಂದೆ ಶಾಸನವೊಂದನ್ನು ತರಲು ಸರ್ಕಾರ ಆಲೋಚಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ಸ್ಟೇಟ್ ಸಚಿವ ಕೆ.ಸಿ. ಪಂತ್ ಅವರು ಇಂದು ಲೋಕಸಭೆಗೆ ತಿಳಿಸಿದರು.
ನಹಾರ್ ಲಾಸ್ಕರ್ ಅವರಿಗೆ ಉತ್ತರ ಕೊಡುತ್ತಿದ್ದ ಪಂತ್ ಅವರು ‘ಪಕ್ಷಾಂತರ ತಡೆ ಕುರಿತು ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ರೂಪಿಸಿದ ಈ ಶಾಸನ ಸಲಹೆ ಕುರಿತು ಪ್ರಧಾನಿ ಅವರು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ರಾಜಕೀಯ ಪಕ್ಷಗಳ ನಾಯಕರ ಜತೆ ಚರ್ಚಿಸಿದರು. ಈ ಚರ್ಚೆ ಅಪೂರ್ಣವಾದ್ದರಿಂದ ಚರ್ಚೆಯಲ್ಲಿ ಎತ್ತಲಾದ ನಾನಾ ಅಂಶಗಳ ಬಗ್ಗೆ ಪ್ರಧಾನಿ ಅವರು ವಿವರಣೆ ನೀಡಿ ಈ ನಾಯಕರಿಗೆ ಪತ್ರ ಬರೆದು ಅವರ ಪ್ರತಿಕ್ರಿಯೆ ಕೇಳಿದರು. ಕೆಲವು ನಾಯಕರುಗಳಿಂದ ಇನ್ನು ಉತ್ತರ ಬಂದಿಲ್ಲ.
ಕಾಶ್ಮೀರದ ಜನರು ಸ್ವಯಂ ನಿರ್ಣಯಾಧಿಕಾರದ ಹಕ್ಕು ಕೇಳುವ ಪ್ರಶ್ನೆಯೇ ಇಲ್ಲ: ಪ್ರಧಾನಿ
ನವದೆಹಲಿ, ಮಾ. 29– ಜಮ್ಮು ಕಾಶ್ಮೀರ ರಾಜ್ಯದ ಜನರು ಯಾವುದೇ ಸ್ವಯಂ–ನಿರ್ಣಯಾಧಿಕಾರದ ಹಕ್ಕು ಕೇಳುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.
‘ಸಮಕಾಲೀನ ಜಗತ್ತಿನಲ್ಲಿ ಸಾಮಾಜಿಕ ಪರಿವರ್ತನೆ, ಸ್ವಾತಂತ್ರ್ಯ ಮತ್ತು ಸಾಮ್ರಾಜ್ಯ ಶಾಹಿ’ ಕುರಿತ ಅಂತರರಾಷ್ಟ್ರೀಯವಿಚಾರಗೋಷ್ಠಿಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಯೊಬ್ಬರಿಗೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು ‘ಭಾದತದ ಅವಿಭಾಜ್ಯ ಭಾಗವಾಗಿರುವ ಜಮ್ಮು– ಕಾಶ್ಮೀರದ ಜನರು ರಾಷ್ಟ್ರದ ಜೀವನ ಹಾಗೂ ಆಶೋತ್ತರಗಳಲ್ಲಿ ಪಾಲ್ಗೊಂಡಿದ್ದಾರೆ. ತಪ್ಪು ದಾರಿಗೆಳೆಯಲ್ಪಟ್ಟಿರುವ, ತೀರಾ ಅತ್ಯಲ್ಪ ಜನರು ಮಾತ್ರ ಸ್ವಯಂ–ನಿರ್ಣಯಾಧಿಕಾರದ ಹಕ್ಕು ಕೇಳಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.