ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದರೂ ಭಾರತೀಯ ಸಮಾಜದಲ್ಲಿ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಲೇ ಇವೆ. ಬದಲಾದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಹೆಚ್ಚುತ್ತಿದ್ದು, ತಮ್ಮ ಸ್ವರೂಪವನ್ನು ಬದಲಾಯಿಸಿಕೊಂಡಿವೆ. ಗುಜರಾತ್ನಲ್ಲಿ ಕುದುರೆ ಮೇಲೆ ಸವಾರಿ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನನ್ನು ಕೊಂದಿರುವುದು ದುರಂತವೇ ಸರಿ.
ಊನ ಗಲಾಟೆ, ರೋಹಿತ್ ವೇಮುಲನ ಸಾವು, ಭೀಮ-ಕೋರೆಗಾಂವ್ ಘರ್ಷಣೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗಲಭೆಗಳು... ದಲಿತರನ್ನು ಈಗಾಗಲೇ ಹಿಂಡಿ ಹಿಪ್ಪೆ ಮಾಡಿವೆ. ಇದರ ನಡುವೆ ಬಡ್ತಿ ಮೀಸಲಾತಿ, ಎಸ್.ಸಿ.– ಎಸ್.ಟಿ. ಕಾಯ್ದೆಗೆ ತಂದಿರುವ ತಿದ್ದುಪಡಿ ದಲಿತರ ಆತಂಕವನ್ನು ಹೆಚ್ಚಿಸಿವೆ.
ಪ್ರಸ್ತುತ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಜಾತಿ, ಧರ್ಮ, ಆಹಾರದ ಹೆಸರಿನಲ್ಲಿ ಜನ ಸಮುದಾಯಗಳನ್ನು ಛಿದ್ರಗೊಳಿಸಿ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಾ ಸಾಗುತ್ತಿವೆ. ದೇಶದೆಲ್ಲೆಡೆ ಸ್ಪೃಶ್ಯ ದಲಿತರನ್ನು ಅಸ್ಪೃಶ್ಯರ ವಿರುದ್ಧ ಎತ್ತಿಕಟ್ಟಿ, ರಾಜಕೀಯ ದಾರಿಯನ್ನು ಹಸನು ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ದಲಿತರು ತಿರುಗಿ ಬಿದ್ದಿದ್ದಾರೆ. ಶೋಷಿತ ಸಮುದಾಯಗಳಿಗೆ ಬಲವಾಗಿದ್ದ ಉತ್ತಮ ಕಾಯ್ದೆಯೊಂದನ್ನು ಶಕ್ತಿಹೀನಗೊಳಿಸಿರುವ ಮನಸ್ಥಿತಿ ದಲಿತರನ್ನು ಬೀದಿಯಲ್ಲಿ ತಂದು ನಿಲ್ಲಿಸಿದೆ.
ದಲಿತ ಸಮುದಾಯಗಳ ನಡುವಿನ ವಿಘಟನೆ, ರಾಜಕೀಯ ಪ್ರಜ್ಞೆಯ ಕೊರತೆ, ವಿದ್ಯಾವಂತರಲ್ಲಿನ ಬೌದ್ಧಿಕ ದಾರಿದ್ರ್ಯ, ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿರುವ ಸಂಘಟನೆಗಳು, ರಾಜಕಾರಣಿಗಳ ಸ್ವಹಿತಾಸಕ್ತಿ, ದೂರದೃಷ್ಟಿಯಿಲ್ಲದ ಹೋರಾಟಗಳು ಇದಕ್ಕೆಲ್ಲ ಕಾರಣ. ಆದ್ದರಿಂದ ಗತಕಾಲದಿಂದಲೂ ಅಸ್ಪೃಶ್ಯರನ್ನು ಸಹಿಸಿಕೊಳ್ಳದ ಮೂಲಭೂತವಾದಿಗಳ ವಿರುದ್ಧ ಛಿದ್ರಗೊಂಡಿವ ದಲಿತ ಸಮುದಾಯಗಳು ಒಗ್ಗಾಟ್ಟಾಗಿ ‘ಅಂಬೇಡ್ಕರ್ ಹಾದಿಯೇ ಅಂತಿಮ’ ಎಂಬ ಸತ್ಯವನ್ನು ಅರಿಯಬೇಕಿದೆ.
ಡಾ.ಬಿ.ಆರ್.ಮಂಜುನಾಥ್ ಬೆಂಡರವಾಡಿ, ಗುಂಡ್ಲುಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.