ಮಲೆನಾಡಿನ ಅಡಿಕೆ ಬೆಳೆಗೆ ಕಳೆದ ಕೆಲ ವರ್ಷಗಳಿಂದ `ಹಳದಿ ಎಲೆ ರೋಗ~ ಬಂದಿದ್ದು ದಿನೇ ದಿನೇ ತೋಟದ ಉತ್ಪತ್ತಿ ಕಡಿಮೆಯಾಗುತ್ತಿದೆ.
ತೋಟ ಅಭಿವೃದ್ಧಿಪಡಿಸಲು ಬ್ಯಾಂಕ್ಗಳಲ್ಲಿ ಮಾಡಿದ ಸಾಲ ತೀರಿಸಲಾರದೆ ರೈತರು ಹತಾಶರಾಗಿದ್ದಾರೆ. ಇನ್ನೊಂದೆಡೆ ಪರ್ಯಾಯವಾಗಿ ಬೆಳೆದ ಏಲಕ್ಕಿ, ಬಾಳೆ ಮುಂತಾದವಕ್ಕೆ ಪ್ರಾಣಿಗಳ ಕಾಟ. ಒಟ್ಟಾರೆ ರೈತರು ಸಾಲ ಕಟ್ಟುವುದಿರಲಿ ಜೀವನ ನಿರ್ವಹಣೆಗೆ ಬೇರೆ ವೃತ್ತಿಗೆ ಬದಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರದ ತೋಟಗಾರಿಕಾ ಮಿಷನ್ನ ಡಾ. ಗೋರಕ್ಸಿಂಗ್ ಅವರು ಈ ಭಾಗದ ತೋಟಗಳ ಸಮೀಕ್ಷೆ ಮಾಡಿ ರೋಗಪೀಡಿತ ತೋಟಗಳ ರೈತರ ಸಾಲ ಮನ್ನಾ ಮತ್ತು ಪುನಶ್ಚೇತನ ಮತ್ತು ಪರ್ಯಾಯ ಬೆಳೆ ಬೆಳೆಯಲು ಕಡಿಮೆ ಬಡ್ಡಿ ದರದಲ್ಲಿ ಮರು ಸಾಲ ನೀಡಿಕೆ ಮಾಡಬೇಕೆಂದು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದರು.
ವರ್ಷಗಳು ಕಳೆದರೂ ಅವರ ವರದಿಯನ್ನು ಸರ್ಕಾರ ಜಾರಿಗೊಳಿಸಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕೆಲವು ದಿನಗಳ ಹಿಂದೆ ರೈತರಿಗೆ ಸಾಲ ಮರುಪಾವತಿ ಮಾಡಬೇಕೆಂದು ನೋಟೀಸ್ ಜಾರಿ ಮಾಡಿದ್ದಾರೆ.
ಬ್ಯಾಂಕ್ಗಳ ಈ ಕ್ರಮದಿಂದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿವೆ. ಆದರೆ ಇದುವರೆಗೂ ಯಾವುದೇ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿಲ್ಲ.
ಸಂತ್ರಸ್ತ ರೈತರಿಗಾಗಿ ಗೋರಕ್ಸಿಂಗ್ ವರದಿತಕ್ಷಣವೇ ಜಾರಿ ಮಾಡಬೇಕು, ರೈತರ ಸಾಲ ಮನ್ನಾ ಮತ್ತು ಪರ್ಯಾಯ ಬೆಳೆಗೆ ಅನುದಾನ ಬಿಡುಗಡೆ ಮಾಡಬೇಕು, ಕಾಫಿ ಬೆಳೆಯಲು ಭೂಮಿ ಸಕ್ರಮ ಮಾಡಿಕೊಡುವ ಮೂಲಕ ರೈತರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.