ADVERTISEMENT

ಅತಿಥಿ ಉಪನ್ಯಾಸಕರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ನೇಮಕಾತಿಗಾಗಿ ಎಂ.ಫಿಲ್. ಹಾಗೂ ಪಿಎಚ್.ಡಿ. ಪದವಿಗಳನ್ನು ಸ್ಲೆಟ್ ಮತ್ತು ನೆಟ್ ಪರೀಕ್ಷೆಗಳಿಗೆ ಸಮಾನ ಮಾನದಂಡವಾಗಿ ಪರಿಗಣಿಸಿ ನೇಮಕಾತಿ ಮಾಡಿಕೊಂಡಿರುತ್ತದೆ.

 ಆರನೇ ವೇತನ ಪರಿಷ್ಕರಣೆಗಾಗಿ ನೇಮಿಸಿದ ನ್ಯಾಯಮೂರ್ತಿ ಛಡ್ಡಾವರದಿಯು 2009 ಜುಲೈ 10ರೊಳಗಾಗಿ ಎಂ.ಫಿಲ್. ಪದವಿಪಡೆದ ಅಭ್ಯರ್ಥಿಗಳು ಪದವಿ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಅರ್ಹರೆಂದು ತನ್ನ ವರದಿಯನ್ನು ಪ್ರಕಟಿಸಿದೆ.

ಅದರಂತೆ ಮೈಸೂರು ವಿಶ್ವವಿದ್ಯಾಲಯವು ಸಹ ಯುಜಿಸಿ ನಿಯಮದಂತೆ 2009 ರ ಒಳಗೆ ಎಂ.ಫಿಲ್ ಪದವಿ ಪಡೆದ ಅಭ್ಯರ್ಥಿಗಳು ಪದವಿ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಅರ್ಹರೆಂದು ಕೆಲವೇ ದಿನಗಳ ಹಿಂದೆ ಪ್ರಕಟಿಸಿ ಎಂ.ಫಿಲ್. ಕೋರ್ಸನ್ನು ಮುಚ್ಚಲು ನಿರ್ಧರಿಸಿದೆ.

ಆದರೆ ಯುಜಿಸಿ ನಿಯಮವನ್ನು ಗಾಳಿಗೆ ತೂರಿದ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು  ಇದೇ ತಿಂಗಳ 18ರಂದು ರಾಜ್ಯದ ಎಲ್ಲಾ ಜಂಟಿ ನಿರ್ದೇಶಕರ ಶಿಕ್ಷಣ ಇಲಾಖೆಗಳಿಗೆ ಮತ್ತು ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ ಅದರಲ್ಲಿ ಎಂ.ಫಿಲ್. ಪದವಿಯನ್ನು ನಿರಾಕರಿಸಿದೆ. ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಸ್ಲೆಟ್, ನೆಟ್ ಮತ್ತು ಪಿಎಚ್.ಡಿ. ಪದವೀಧರರಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ಆದರೆ ಎಂ.ಫಿಲ್. ಪದವೀಧರರನ್ನು ಕಡೆಗಣಿಸಿ ಅನ್ಯಾಯ ಎಸಗಿದೆ. ಇದರಿಂದ 2009 ರೊಳಗೆ ಎಂ.ಫಿಲ್. ಪದವಿಯನ್ನು ಮುಗಿಸಿದ ಅಭ್ಯರ್ಥಿಗಳು ಹಲವು ವರ್ಷಗಳ ಕಾಲ ಪದವಿ ಕಾಲೇಜುಗಳಲ್ಲಿ  ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ ಈಗ ಅವರ ಗತಿ ಏನು?

ಈಗ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆದು ಅದರಲ್ಲಿ ಎಂ.ಫಿಲ್. ವಿದ್ಯಾರ್ಥಿಗಳನ್ನು ಗಮನಕ್ಕೆ ತೆಗೆದುಕೊಂಡು ಮತ್ತೊಂದು ಸುತ್ತೋಲೆಯನ್ನು ಹೊರಡಿಸಬೇಕು. ಇಲ್ಲವಾದಲ್ಲಿ 2009 ರೊಳಗೆ ಎಂ.ಫಿಲ್. ಪದವಿ ಪಡೆದ ನಾನ್ ಸೆಮಿಸ್ಟರ್ ಅಭ್ಯರ್ಥಿಗಳ ಭವಿಷ್ಯವನ್ನು ಸರ್ಕಾರವೇ ನುಚ್ಚು-ನೂರು ಮಾಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.