ADVERTISEMENT

ಇಫ್ತಾರ್ ಕೂಟ ರದ್ದತಿ : ಸ್ವಾಗತಾರ್ಹ ಕ್ರಮ

ಎಂ.ಅಬ್ದುಲ್ ರೆಹಮಾನ್ ಪಾಷ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

ರಾಷ್ಟ್ರಪತಿ ಭವನದಲ್ಲಿ ಈ ವರ್ಷ ಇಫ್ತಾರ್ ಕೂಟ ಏರ್ಪಡಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ನಿರ್ಧರಿಸಿದ್ದಾರೆ. ಇದು ಬಹಳ ಹಿಂದೆಯೇ ತೆಗೆದುಕೊಳ್ಳಬೇಕಿದ್ದ ಪ್ರಗತಿಪರವಾದ ಒಂದು ಕ್ರಮ. ‘ಇಫ್ತಾರ್’ ಎಂದರೆ ರಂಜಾನ್ ತಿಂಗಳಲ್ಲಿ ಶ್ರದ್ಧಾವಂತ ಮುಸಲ್ಮಾನರು ಸೂರ್ಯೋದಯಕ್ಕಿಂತ ಸ್ವಲ್ಪ ಮುಂಚಿನಿಂದ, ಸೂರ್ಯಾಸ್ತದ ನಂತರ ಸ್ವಲ್ಪ ಹೊತ್ತಿನವರೆಗೆ ನೀರೂ ಕುಡಿಯದೆ, ಸದಾಚಾರ, ಸದಾಲೋಚನೆಯಲ್ಲಿಯೇ ಅಲ್ಲಾಹ್‍ನ ಆರಾಧನೆಯಲ್ಲಿ ಕಳೆದು, ಸಂಜೆ ಹೊತ್ತಿನಲ್ಲಿ ಈ ‘ರೋಜಾ’ವನ್ನು ಮುಕ್ತಾಯಗೊಳಿಸುವ ಧಾರ್ಮಿಕ ವಿಧಿ. ಒಂದು ಧರ್ಮಕ್ಕೆ ಅನ್ವಯವಾಗುವ ಇಂಥ ಆಚರಣೆಗೆ ಮುಸ್ಲಿಮರಲ್ಲದವರನ್ನೂ ಕರೆದು ಔತಣಕೂಟ ಇಟ್ಟುಕೊಂಡರೆ ಅದು ‘ಇಫ್ತಾರ್’ ಅಲ್ಲ, ಭೋಜನಕೂಟವಾಗುತ್ತದೆ.

‘ರಾಷ್ಟ್ರಪತಿ ಭವನ ಸಾರ್ವಜನಿಕ ಕಟ್ಟಡ, ಆದ್ದರಿಂದ ಇಂಥ ಜಾಗದಲ್ಲಿ ಜನರ ತೆರಿಗೆ ಹಣವನ್ನು ಬಳಸಿ ಯಾವುದೇ ಧಾರ್ಮಿಕ ಆಚರಣೆ ಅಥವಾ ಕಾರ್ಯಕ್ರಮ ಹಮ್ಮಿಕೊಳ್ಳದಿರಲು’ ರಾಷ್ಟ್ರಪತಿ ತೀರ್ಮಾನಿಸಿರುವುದು ಸ್ವಾಗತಾರ್ಹ. ‘ಈ ನಿರ್ಧಾರ ದೇಶದ ಜಾತ್ಯತೀತ ತತ್ವಕ್ಕೆ ಅನುಗುಣವಾಗಿದ್ದು, ಯಾವುದೇ ಧರ್ಮದ ಧಾರ್ಮಿಕ ವಿಧಿ, ಆಚರಣೆಗೆ ಅನ್ವಯವಾಗಲಿದೆ’ ಎಂದು ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.

ಸಾರ್ವಜನಿಕ (ಕಟ್ಟಡವಲ್ಲ) ಸಂಸ್ಥೆಯಲ್ಲಿ ಇನ್ನು ಮೇಲಿಂದ ನಿಲ್ಲಿಸುವುದಕ್ಕೆ ರಾಷ್ಟ್ರಪತಿಗಳಿಗೆ ಅಲ್ಪಸಂಖ್ಯಾತರ ಧರ್ಮಕ್ಕೆ ಸಂಬಂಧಪಟ್ಟ ಆಚರಣೆಯೇ ಮೊದಲು ಸಿಕ್ಕಿತು ಎನ್ನುವುದನ್ನು ನಾವು ಉಪೇಕ್ಷಿಸಬಹುದು. ಆದರೂ, ತಮ್ಮ ಈ ಆದರ್ಶವು ರಾಜ್ಯಪಾಲರ ಭವನಗಳು ಮತ್ತು ವಿಧಾನಸಭೆಗಳು, ಸರ್ಕಾರಿ ಕಚೇರಿಗಳು ಇತ್ಯಾದಿಗಳಿಗೂ ಅನ್ವಯಿಸುವಂತೆ ರಾಷ್ಟ್ರಪತಿ ಒಂದು ಆದೇಶವನ್ನು ಜಾರಿ ಮಾಡುವುದಾದರೆ, ತಮಗೆ ನಿಷಿದ್ಧವಾದ, ‘ಜಾತ್ಯತೀತ ಸಾರ್ವಜನಿಕ ಸ್ಥಳ’ಗಳಲ್ಲಿ ತಮ್ಮನ್ನು ಎಳೆದು ತಂದು ಪೂಜೆ, ಹೋಮ ಇತ್ಯಾದಿ ಮಾಡುತ್ತಿರುವ ರಾಜಕಾರಣಿಗಳಿಂದ ಅವರವರ ದೇವರುಗಳಿಗೆ ಮುಕ್ತಿ ಸಿಗಬಹುದು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.