ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತು ನಾಯಕರುಗಳು ಲೋಕಾಯುಕ್ತರು ಮತ್ತು ರಾಜ್ಯಪಾಲರೆಂದರೆ ವಿಚಿತ್ರವಾದಂತಹ ಭಯದಿಂದ ಬೆವರುತ್ತಿದ್ದಾರೆ. ಸರ್ಕಾರವನ್ನು ನಡೆಸುವ ಜನ ಯಾವುದೇ ತಪ್ಪು ಮಾಡಿಲ್ಲ. ಎಲ್ಲವೂ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ಆ ಪಕ್ಷದ ರಾಷ್ಟ್ರೀಯ ನಾಯಕರುಗಳು ಪದೇ ಪದೇ ಸಮರ್ಥನಾ ಪತ್ರ ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರೂ ವಿರೋಧ ಪಕ್ಷದವರು ರಾಜ್ಯಪಾಲರ ಭೇಟಿ ಮಾಡಿದರೆ ಸಾಕು, ಮೈಮೇಲೆ ದೆವ್ವ ಬಂದವರಂತೆ ಆಡಳಿತ ಪಕ್ಷದ ಮುಖಂಡರುಗಳು ಅರಚಾಡುತ್ತಿದ್ದಾರೆ.
ಪ್ರಾಮಾಣಿಕರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಯಾವುದೇ ತಪ್ಪು ಆಗಿಲ್ಲ ಎನ್ನುವುದಾದರೆ ಎಷ್ಟೇ ವಿರೋಧ ಪಕ್ಷದ ನಾಯಕರುಗಳು ಬೊಬ್ಬೆ ಹೊಡೆದರೂ ರಾಜ್ಯಪಾಲರು ತಾನೆ ಏನು ಮಾಡಲು ಸಾಧ್ಯ. ಏನಾದರೂ ಹುಳುಕು ಇದ್ದರೆ ಮಾತ್ರ ರಾಜ್ಯಪಾಲರು ಕ್ರಮ ಜರುಗಿಸಲು ಸಾಧ್ಯ. ಇಲ್ಲದಿದ್ದರೆ ರಾಜ್ಯಪಾಲರ ಭೇಟಿ ಸಹಜಕ್ರಿಯೆಯಾಗುತ್ತದೆ.
ಅನೇಕ ಕಚೇರಿಗಳಂತೆ ರಾಜಭವನವೂ ಸಹ ಒಂದು ಕಚೇರಿಯಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷದವರೂ ಭೇಟಿ ನೀಡುವುದು ಸಹಜ. ಅದರಲ್ಲಿ ಏನೂ ವಿಶೇಷವಿರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಅನವಶ್ಯಕವಾಗಿ ರಾಜ್ಯಪಾಲರ ಭವನದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.