ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲಮನ್ನಾ ಮಾಡುವ ಭರವಸೆ ವ್ಯಕ್ತಪಡಿಸಿರುವುದು ಶ್ಲಾಘನೀಯ. ಆದರೆ ಎಲ್ಲಾ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸುವುದು ಸರಿಯಲ್ಲ.
ಸಾಲ ತೀರಿಸಲಾಗದ ಬಡ ರೈತರಿಗೆ ಸಾಲಮನ್ನಾ ಅನಿವಾರ್ಯ ಆಗಿರುವುದು ನಿಜ. ಆದರೆ ಆರ್ಥಿಕವಾಗಿ ಸಬಲರಾಗಿರುವ ರೈತರ ಸಾಲ ಮನ್ನಾ ಮಾಡುವ ಅಗತ್ಯವಿಲ್ಲ. ರಾಜ್ಯದ ಎಲ್ಲಾ ರೈತರೂ ಸಾಲ ತೀರಿಸಲಾಗದ ದಯನೀಯ ಸ್ಥಿತಿಯಲ್ಲಿದ್ದಾರೆ ಎಂಬ ಮನಸ್ಥಿತಿಯೇ ವಿವೇಕರಹಿತವಾದದ್ದು. ಸರ್ಕಾರ ಮಾತ್ರವಲ್ಲ, ನಾಡಿನ ಪ್ರಜ್ಞಾವಂತ ರೈತರೂ ಈ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.
ಸಾಲಮನ್ನಾದಿಂದ ಸರ್ಕಾರವು ಹಲವಾರು ಕೋಟಿಗಳ ಆರ್ಥಿಕ ಹೊರೆಯನ್ನು ಎದುರಿಸಬೇಕಾಗುತ್ತದೆ. ಈ ಹೊರೆಯು ತೆರಿಗೆಯ ರೂಪದಲ್ಲಿ ನಾಗರಿಕರ ಮೇಲೆಯೇ ಬರುತ್ತದೆ. ಆದ್ದರಿಂದ ಆರ್ಥಿಕವಾಗಿ ಸದೃಢರಾಗಿರುವ ರೈತರು ಸಾಲ ತೀರಿಸುವ ಹೊಣೆಯನ್ನು ಸರ್ಕಾರಕ್ಕೆ ಒಪ್ಪಿಸದೆ, ತಾವೇ ತೀರಿಸುವ ನಿರ್ಧಾರವನ್ನು ಕೈಗೊಂಡರೆ ತಮ್ಮ ವೃತ್ತಿಯ ಘನತೆಯನ್ನು ಉಳಿಸಿಕೊಂಡಂತಾಗುತ್ತದೆ.
– ವಿಶ್ವನಾಥ ಎನ್. ನೇರಳಕಟ್ಟೆ, ಬಂಟ್ವಾಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.