ನಮ್ಮ ರಾಜ್ಯದ 123 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ರಾಜ್ಯ ಸರ್ಕಾರವೇ ಘೋಷಣೆ ಮಾಡಿದೆ. ಬರ ಪ್ರದೇಶದ ಜನರಿಗೆ ನೀರು, ಉದ್ಯೋಗ ಜಾನುವಾರುಗಳಿಗೆ ಮೇವು ಒದಗಿಸಲು ಬದ್ಧವಾಗಿರುವುದಾಗಿ ಸರ್ಕಾರ ಹೇಳುತ್ತಿದೆ. ಮೈಸೂರು ಜಿಲ್ಲೆಯ ಕೌಲಂದೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನತೆ ಅಕ್ಷರಶಃ ತತ್ತರಿಸುತ್ತಿದ್ದಾರೆ.
ಬರ ಅಧ್ಯಯನಕ್ಕೆ ಮುಖ್ಯಮಂತ್ರಿ, ಮಂತ್ರಿಗಳ ಹಿಂದೆ ಅಧಿಕಾರಿಗಳ ದೊಡ್ಡ ದಂಡು ಹೋಗುತ್ತಿದೆ. ಜತೆಗೆ ಪಕ್ಷಗಳ ಸ್ಥಳೀಯ ಮುಖಂಡರು ಪೊಲೀಸರು ಸೇರಿದಂತೆ 30-40 ವಾಹನಗಳು ಬರುತ್ತವೆ.
ಇಷ್ಟು ಹಣ ಖರ್ಚು ಮಾಡಿ ಬರ ಅಧ್ಯಯನ ಮಾಡುವ ಅಗತ್ಯವಿಲ್ಲ. ಸರ್ಕಾರ ಬರ ಸಂತ್ರಸ್ತರಿಗೆ ನಿಧಿಗೆ ಹಣ ಸಂಗ್ರಹಿಸಬಹುದಿತ್ತು. ಮುಖ್ಯಮಂತ್ರಿಯವರು ಅಂಥ ಪ್ರಯತ್ನವನ್ನೇ ಮಾಡಲಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ನಮ್ಮ ಜನರಲ್ಲಿದೆ.
ಅವರ ನೆರವು ಪಡೆದು ಬರ ಪೀಡಿತ ಜನ, ಜಾನುವಾರುಗಳನ್ನು ಜೋಪಾನ ಮಾಡಬಹುದಿತ್ತು. ಮುಖ್ಯಮಂತ್ರಿ ಸರಳತೆ- ಮಿತವ್ಯಯಗಳ ಬಗ್ಗೆ ಭಾಷಣ ಮಾತನಾಡುತ್ತಾರೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.
ಸರ್ಕಾರ ತಕ್ಷಣವೇ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ, ಆ ಹಣವನ್ನು ಬರ ಪರಿಹಾರ ಕಾಮಗಾರಿಗಳಿಗೆ ಬಳಸಬೇಕು. ಇದುವರೆಗೆ ಬರ ನಿರ್ವಹಣೆಯಲ್ಲಿ ಸರ್ಕಾರ ತೋರಿದ ಉದಾಸೀನ ಧೋರಣೆ ನಿಜಕ್ಕೂ ಕರ್ನಾಟಕದ ದೌರ್ಭಾಗ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.