ADVERTISEMENT

ಕಿಷ್ಕಿಂಧೆಯಲ್ಲಿ ಹನುಮಂತನ ಶಿಲ್ಪ ಬೇಡ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ನನಗೆ ತೀರ ಈಚೆಗೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿರುವಂತೆ ಹಂಪಿ ಪಕ್ಕದ ಪಂಪಾ ಸರೋವರದ ದಡದಲ್ಲಿರುವ ಕಿಷ್ಕಿಂಧಾ ಪರ್ವತದ ಬಂಡೆಯಲ್ಲಿ ಹನುಮಂತನ ಮೂರ್ತಿಯನ್ನು ಕೆತ್ತಿಸುವ ಪ್ರಯತ್ನವು ಆರಂಭವಾಗಿ ಅದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಯವರ ಅನುಮತಿಯೂ ದೊರಕಿದೆ.
 
ಈ ಸಂಗತಿ ನಿಜವಾಗಿದ್ದರೆ ಅದು ಅತ್ಯಂತ ಖೇದನೀಯ. ಪಂಪಾಸರೋವರಕ್ಕೂ ರಾಮಾಯಣದ ಕತೆಗೂ ಸಂಬಂಧವಿರುವುದು ಪ್ರಸಿದ್ಧ ವಿಷಯವೇ. ಆದರೆ ಕಿಷ್ಕಿಂಧ ಪರ್ವತದಂತಹ ಬಂಡೆಗಳ ಬೆಟ್ಟದ ಪ್ರಾಕೃತಿಕ ಸೌಂದರ‌್ಯ ನಾಶವಾಗುವುದಲ್ಲದೆ ಅದು ವಿಗ್ರಹ ಹನುಮಂತನಿಂದಾಗಿ ಪೂಜಾ ಸ್ಥಳವೂ ಆದರೆ ಆಗಬಹುದಾದ ಅನಾಹುತಗಳೂ ಸಾಕಷ್ಟಿವೆ.

ಈ ಹಿನ್ನೆಲೆಯಲ್ಲಿ ಹನುಮಂತನ ವಿಗ್ರಹವನ್ನು ಕೆತ್ತಿಸುವ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇನೆ, ಅಲ್ಲಿಗೆ ಉತ್ತರ ಭಾರತದ ಸಾವಿರಾರು ಭಕ್ತರು ವಿಶೇಷವಾಗಿ ಬಂದು ಅಮೂರ್ತ ಹನುಮಂತನನ್ನು ಭಾವನಾತ್ಮಕವಾಗಿ ಅನುಭವಿಸುವ ವಾತಾವರಣವು ಈಗ ಇರುವಂತೆಯೇ ಉಳಿಯಬೇಕು.
 
ಅಲ್ಲಿನ ಪಂಪಾಂಬಿಕೆಗೆ ಮೊದಲಿನಿಂದ ಸಲ್ಲುತ್ತಿರುವ ಪೂಜೆ ಸಹಜವಾಗಿಯೇ ಮುಂದುವರಿಯುತ್ತದೆ. ವಿಗ್ರಹ ಕೆತ್ತಿಸುವುದು ವಿಶ್ವಪರಂಪರೆಯ ಪಟ್ಟಿಗೆ ಹಂಪಿಯನ್ನು ಸೇರಿಸಿರುವ ಯುನೆಸ್ಕೋದ ನಿಯಮಗಳಿಗೆ ಭಂಗ ತರುತ್ತದೆ. ಏಕೆಂದರೆ ಪಂಪಾ ಕ್ಷೇತ್ರವು ಹಂಪಿಯ `ರಕ್ಷಣಾ ಪ್ರದೇಶ~ಕ್ಕೆ ಸೇರಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.