ADVERTISEMENT

ಗಣ್ಯರಿಗೆ ರಕ್ಷಣೆ ಏಕೆ?

ಸಾಮಗ ದತ್ತಾತ್ರಿ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ದುಷ್ಟರ ಕೂಟವೊಂದು ದೆಹಲಿಯಲ್ಲಿ  ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಆಕೆಯ ಮೇಲೆ ತೀವ್ರ ಹಲ್ಲೆ ಮಾಡಿದ್ದು ದುರದೃಷ್ಟಕರ ಘಟನೆ. ಆರು ಜನ ಕಾಮುಕರನ್ನು ಕೊನೆಗೂ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಗೃಹ ಖಾತೆಯ ಅಂಕಿತಕ್ಕೊಳಪಟ್ಟಿರುವುದು ಒಂದು ಚೋದ್ಯ!

ದೆಹಲಿಯ ಜನಸಂಖ್ಯೆ ಸುಮಾರು 1.67 ಕೋಟಿ. ಅಲ್ಲಿ ಪೊಲೀಸರ ಸಂಖ್ಯೆ ಸುಮಾರು 84,000; ಸಾರ್ವಜನಿಕ ರಕ್ಷಣಾ ವ್ಯವಸ್ಥೆಗೆ ನಿಯೋಜಿತರಾಗಿರುವ ಪೊಲೀಸರ ಸಂಖ್ಯೆ ಸುಮಾರು 26,000. ಅಂದರೆ ಸುಮಾರು 58000 ಪೊಲೀಸರ ಕೆಲಸ ಏನು? ಕೆಲಸವಿಲ್ಲದಿರಲು ಸಾಧ್ಯವೆ? ಗಣ್ಯರು ಮತ್ತು ಗಣ್ಯಾತಿಗಣ್ಯರ ರಕ್ಷಣೆಯ ಹೊಣೆ ಈ 58000 ಪೊಲೀಸರದ್ದು. ಪೊಲೀಸ್ ವ್ಯವಸ್ಥೆ ಇರುವುದೇ ಸಾರ್ವಜನಿಕರ ರಕ್ಷಣೆಗೆ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಎಂದಾದಾಗ ಗಣ್ಯರು ಮತ್ತು ಗಣ್ಯಾತಿಗಣ್ಯರು ಸಾರ್ವಜನಿಕರು ಎಂದಾಗುವುದಿಲ್ಲವೇ? ಎಲ್ಲಾದರೂ ಉಂಟೆ!

ಅವರು ಗಣ್ಯ ಮತ್ತು ಗಣ್ಯಾತಿಗಣ್ಯ ಸಾರ್ವಜನಿಕರು! ಒಳಮೀಸಲಾತಿಗೆ ಅರ್ಹರು! ಆದರೆ ರಾಜ್ಯಾಂಗ ಈ ವಿಭಜನೆಯನ್ನು ಒಪ್ಪುವುದಿಲ್ಲ. ಈ ಗಣ್ಯರ ವರ್ಗದಲ್ಲಿ ಮಂತ್ರಿಗಳು, ಶಾಸಕರು, ಸಂಸದರೂ ಸೇರುತ್ತಾರೆ ಅಲ್ಲವೇ? ಇವರುಗಳಿಗೆ ಏಕೆ ಸ್ವಾಮಿ ವಿಶೇಷ ರಕ್ಷಣೆ? ಎಷ್ಟೆಂದರೂ ಇವರು ಪ್ರಜಾನುರಾಗಿಗಳು ಅಲ್ಲವೇ? ಇವರು ಪ್ರಜೆಗಳ ನಡುವೆ ಸಲೀಸಾಗಿ ಒಡನಾಡಬೇಕು. ಇವರಿಗೆ ಜೀವ ಭಯ ಎಂದಾದರೆ ಇವರು ಅದೆಂಥ ಪ್ರಜಾಪ್ರತಿನಿಧಿಗಳು. ಇವರ ರಕ್ಷಣೆಗೆ ಒತ್ತು ಕೊಟ್ಟು ಸಾಮಾನ್ಯ ಪ್ರಜೆ ತನ್ನ ಜೀವವನ್ನು ಮುಷ್ಟಿಯಲ್ಲಿಟ್ಟುಕೊಂಡು ವ್ಯವಹರಿಸುವ ಪಾಡು ಅದೆಂಥ ಪ್ರಜಾಪ್ರಭುತ್ವ. ಆಡಳಿತ ಈ ನಿಟ್ಟಿನಲ್ಲಿ ವಿಚಾರ ಮಾಡಬೇಡವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.