ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣವನ್ನು ಶೇ.30ಕ್ಕೆ ಹೆಚ್ಚಿಸುವ ಕಾರಣ ನೀಡಿ ರಾಜ್ಯ ಸರ್ಕಾರ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೆಲವು ನಿರ್ದಿಷ್ಟ ಮಾನದಂಡಗಳ ಅಡಿಯಲ್ಲಿ ಅನುಮತಿ ನೀಡಲು ಮುಂದಾಗಿರುವುದು ಆತಂಕಕಾರಿ ವಿಚಾರವಾಗಿದೆ.
ಸರ್ಕಾರವು ಖಾಸಗಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲು ಮುಂದಾಗಿರುವುದರ ಹಿಂದೆ ಉನ್ನತ ಶಿಕ್ಷಣವನ್ನು ಎಲ್ಲರಿಗೂ ದೊರಕಿಸಿಕೊಡುವ ತನ್ನ ಪ್ರಾಥಮಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅಲ್ಲದೆ ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಪರಿವರ್ತಿಸಿ, ಖಾಸಗಿ ವ್ಯಕ್ತಿ, ಕಂಪನಿಗಳ ಲಾಭಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಬಹಳ ಸ್ಪಷ್ಟವಾಗಿದೆ.
ಇತ್ತೀಚೆಗೆ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ನಾನಾ ವಿ.ವಿ.ಕುಲಪತಿಗಳು, ವಿಶ್ರಾಂತ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಒಳಗೊಂಡ ತಂಡ, ಖಾಸಗಿ ಸಂಸ್ಥೆಗಳಿಗೆ ಮುಕ್ತ ಸ್ವಾತಂತ್ರ್ಯ, ವಿ.ವಿ.ಕ್ಯಾಂಪಸ್ ವಿಸ್ತಾರ, ಸೀಟು ಹಂಚಿಕೆ ಪ್ರಮಾಣ, ಶುಲ್ಕ ನಿಗಧಿ, ವಿ.ವಿ.ಗಳ ಮೇಲೆ ನಿಗಾ ಇಡಲು ನಿಯಂತ್ರಣ ಪ್ರಾಧಿಕಾರ, ಇತ್ಯಾದಿ ವಿಚಾರಗಳನ್ನು ಚರ್ಚಿಸಿ 40 ಖಾಸಗಿ ವಿ.ವಿ. ಆರಂಭಿಸಲು ಹಸಿರು ನಿಶಾನೆ ತೋರಿರುವುದು ನಮ್ಮ ಸರ್ಕಾರಿ ವಿ.ವಿ.ಗಳು ತಮ್ಮ ನೈತಿಕತೆ, ಸ್ವಾಯತ್ತತೆ ಕಳೆದುಕೊಂಡು ಬೀಗ ಜಡಿಯುವಂತೆ ಮಾಡುವುದು ಖಚಿತವಾಗಿದೆ.
ಆರ್ಥಿಕ ಕ್ಷೇತ್ರವನ್ನು ತ್ರಿ-ಕರಣ (ಜಾಗತಿಕ ಖಾಸಗಿ- ಉದಾರಿ) ಪ್ರವೇಶಿಸಿ ಸಾವಿರಾರು ದೇಶಿ ಉದ್ದಿಮೆಗಳು ದಿವಾಳಿಯಾದವು. ಇನ್ನು ಉನ್ನತ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತ ನೆನಸಿಕೊಳ್ಳಲು ಭಯವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.