ADVERTISEMENT

ನಷ್ಟ ದೇಶಕ್ಕೆ

ಸಾಮಗ ದತ್ತಾತ್ರಿ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಸರ್ಕಾರಿ ಅಧಿಕಾರಿಗಳು ಪಕ್ಷಪಾತ ಮಾಡದೆಯೆ ನಿರ್ಭೀತಿಯಿಂದ ಕೆಲಸ ಮಾಡಿದರೂ ರಾಜಕೀಯಸ್ಥರ ಕೂಟ ವ್ಯವಸ್ಥೆ ಎಂಥ ಅನ್ಯಾಯಕ್ಕಾದರೂ ಎಗ್ಗಿಲ್ಲದೆ ಕೈ ಹಾಕುತ್ತದೆನ್ನುವುದಕ್ಕೆ ವಾದ್ರಾ ಭೂ ಹಗರಣ ಸಂದರ್ಭದಲ್ಲಿ ಮೂರೂವರೆ ಎಕರೆ ಜಾಗದ ಭೂ ಪರಿವರ್ತನೆಯನ್ನು ರದ್ದುಗೊಳಿಸಿದ ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರನ್ನು ಹರಿಯಾಣ ಸರ್ಕಾರವು ಎತ್ತಂಗಡಿ ಮಾಡಿರುವುದೇ ಸಾಕ್ಷಿಯಾಗಿದೆ.
 
ಹರಿಯಾಣ ಸರ್ಕಾರದ ಒಲವು ಯಾರತ್ತ ಎನ್ನುವುದೂ ಇದರಿಂದ ಸಾಬೀತಾಗುತ್ತದೆ. ಹರಿಯಾಣ  ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳುವ ಸಂಸದ ಹರಿಪ್ರಸಾದ್ ಪ್ರಕಾರ ಅಧಿಕಾರಿಗಳನ್ನು ವರ್ಗ ಮಾಡುವುದು ಯಾವುದೇ ಸರ್ಕಾರಕ್ಕೆ ದತ್ತವಾಗಿರುವ ವಿಶೇಷಾಧಿಕಾರ.
 
ನಿಜ ; ಆದರೆ ವಿಶೇಷಾಧಿಕಾರ ಎಂದೊಡನೆಯೇ ಅದರೊಂದಿಗೆ ಇರುವ, ಇರಲೇಬೇಕಾದ `ವಿವೇಚನೆ~ಯನ್ನು ಸರ್ಕಾರ ಕಡೆಗಣಿಸುವಂತಿಲ್ಲ. ಆದರೆ ರಾಜಕಾರಣಿಗಳಿಗೆ `ವಿವೇಚನೆ~ ಬಗ್ಗೆ ನಂಬಿಕೆ ಇಲ್ಲ.

ವರ್ಗಾವಣೆಯ ವಿಷಯದಲ್ಲಿ ಕೆಲವೊಂದು ಮಾರ್ಗಸೂಚಿಗಳಿರುತ್ತವೆ. ಇವನ್ನು ಕಡೆಗಣಿಸುವಂತಿಲ್ಲ. ಇವನ್ನು ಸರ್ಕಾರವೇ ರೂಪಿಸಿರುತ್ತದೆ. (ಅಶೋಕ್ ಖೇಮ್ಕಾ ಕನಿಷ್ಟ 2 ವರ್ಷಗಳು ಅವರ ಹುದ್ದೆಯಲ್ಲಿ ಮುಂದುವರಿಯುವ ಅವಕಾಶ ಈ ಮಾರ್ಗಸೂಚಿಯ ಪ್ರಕಾರ ಇತ್ತು).

ಆಡಳಿತಾತ್ಮಕ ಕಾರಣಗಳಿಗಾಗಿ ಅಥವಾ ಸಾರ್ವಜನಿಕ ಹಿತದೃಷ್ಟಿಯ ನೆಲೆಯಲ್ಲಿ ವರ್ಗಾವಣೆಯಾದರೆ ಅದನ್ನು ಪ್ರಶ್ನಿಸಲು ಬಾರದು. ಆದರೆ ವರ್ಗಾವಣೆಯು ಅಸಮರ್ಪಕ ಮತ್ತು ನ್ಯಾಯಬಾಹಿರ ಕಾರಣಗಳಿಗೆ ನಡೆದಿದ್ದರೆ, ಮತ್ತು ಈ ತೀರ್ಮಾನಕ್ಕೆ ಬರಲು ಬಲವತ್ತರವಾದ ಮತ್ತು ನಂಬಬಹುದಾದ ಬೆಳವಣಿಗೆಗಳು ಹಿನ್ನೆಲೆಯಲ್ಲಿದ್ದರೆ, ಅಂಥ ವರ್ಗಾವಣೆಯು ನ್ಯಾಯಾಲಯದಲ್ಲಿ ಅಸಿಂಧುವಾಗುತ್ತದೆ.

(ಈ ಕುರಿತು ಅನೇಕ ತೀರ್ಪುಗಳಿವೆ). ಅಶೋಕ್ ಖೇಮ್ಕಾರ ವಿಷಯದಲ್ಲಿ ಸರ್ಕಾರದ ಪಾತ್ರ ನಂಬಿಕೆಗೆ ಅನುಮಾನದ ಬಣ್ಣವನ್ನು ಲೇಪಿಸಿದೆ.   ನಾಗರಿಕ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರನ್ನು ಚದುರಂಗದ ಕಾಯಿಗಳನ್ನಾಗಿ ಮಾಡಿಕೊಂಡರೆ ನಷ್ಟ ದೇಶಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.