ಮೈಸೂರಿನ ಸಂಚಾರ ಠಾಣೆಯೊಂದರ ಎಎಸ್ಐ ಒಬ್ಬರು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು, ನೋಟುಗಳನ್ನೇ ನುಂಗಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದು ಹೇಸಿಗೆ ಹುಟ್ಟಿಸುತ್ತದೆ.
ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಅಧಿಕಾರಿಗಳ ಕಣ್ಮುಂದೆಯೇ ನೋಟುಗಳನ್ನು ನುಂಗಿದ ಅವರು, ಇನ್ನು ಕಾಣದ ಹಾಗೆ ಇನ್ನೆಷ್ಟು ನೋಟುಗಳನ್ನು ‘ನುಂಗಿರಬಹುದು’ ಎಂಬ ಜನಸಾಮಾನ್ಯರ ಅನುಮಾನಕ್ಕೆ ಎಸಿಬಿ ಅಧಿಕಾರಿಗಳು ಸೂಕ್ತ ತನಿಖೆಯಿಂದ ಉತ್ತರಿಸಬೇಕಾಗಿದೆ. ಹಳ್ಳ ತೋಡಿದಷ್ಟೂ ಸಿಗಬಹುದಾದ ಇಂತಹ ಭ್ರಷ್ಟರನ್ನು ಬಯಲಿಗೆಳೆಯಬೇಕಾಗಿದೆ.
ಪರವಾನಗಿ ಪಡೆದ ಗೂಂಡಾಗಳಂತೆ ವರ್ತಿಸುವ ಕೆಲವು ಪೊಲೀಸರಿಂದ ಜನಸಾಮಾನ್ಯರ ಬದುಕಿಗೆ ಪಾರ್ಶ್ವವಾಯು ಹೊಡೆದಂತಹ ಅನುಭವವಾಗುತ್ತಿದೆ. ಇಂತಹವರು ನಾಗರಿಕರ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವುದಿರಲಿ, ಅವುಗಳನ್ನು ದೊಡ್ಡ ಸಮಸ್ಯೆಗಳನ್ನಾಗಿ ಪರಿವರ್ತಿಸುವ ಜಾಣ್ಮೆ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಾನವೀಯತೆಯ ಸೆಲೆ ಮಾಯವಾಗುತ್ತಿರುವುದನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಕಠಿಣ ಕ್ರಮ ಕೈಗೊಳ್ಳದ ಹೊರತು ವ್ಯವಸ್ಥೆ ಸುಧಾರಿಸದು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕೇವಲ ಘೋಷಣೆಗೆ ಸೀಮಿತವಾಗದಿರಲಿ.
-ಆರ್.ಎನ್.ಸತ್ಯನಾರಾಯಣ ರಾವ್, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.