ಕಳೆದ ವಾರ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಕುರಿತ ಬಿಸಿ ಬಿಸಿ ಚರ್ಚೆ ನೋಡಿದ್ದೇವೆ. ವಿದೇಶಿ ನೇರ ಬಂಡವಾಳದ ವಿರುದ್ಧ ಮಾತನಾಡಿದವರೂ ಕೊನೆಯಲ್ಲಿ ಹೇಗೆ ಸರ್ಕಾರದ ಪರವಾಗಿ ಮತ ಹಾಕಿದರು ಎಂಬುದನ್ನೂ ಕಂಡಿದ್ದೇವೆ.
ಅದರ ಹಿಂದಿನ ಮರ್ಮ ಏನಿರಬಹುದು ಎಂದೂ ಇಡೀ ದೇಶಕ್ಕೇ ಗೊತ್ತು.ಇದೇ ಗುಂಗಿನಲ್ಲಿದ್ದ ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ನಾಟಕ ನೋಡಿದೆ.
ನಾಟಕ `ನಮ್ಮ ರಾಬರ್ಟ್ ಕ್ಲೈವ್'. ಕಥೆ, ಸಂಭಾಷಣೆ ಮತ್ತು ನಿರ್ದೇಶನ ಪ್ರಕಾಶ್ ಬೆಳವಾಡಿಯವರದು. ಅಭಿನಯ `ಸಮುದಾಯ' ತಂಡ. ಕ್ರಿ.ಶ.1600ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶ ಮಾಡಿದ್ದು, ಆ ಸಂದರ್ಭದಲ್ಲಿ ದೇಶದಲ್ಲಿನ ರಾಜರುಗಳು, ನವಾಬರು ಬ್ರಿಟಿಷರ ಆಮಿಷಗಳಿಗೆ ಬಲಿಯಾಗಿ ದೇಶದ ಒಂದೊಂದೇ ಪ್ರದೇಶಗಳನ್ನು ಬಿಟ್ಟುಕೊಡುತ್ತಾ ಕೊನೆಗೆ ಇಡೀ ದೇಶವನ್ನೇ ಒತ್ತೆ ಇಡುವ ದೃಶ್ಯ ಮನಕಲಕುವಂತಿತ್ತು.
ನಾಟಕದುದ್ದಕ್ಕೂ ಬರುವ ಪಾತ್ರಗಳು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿನ ಪಾತ್ರಗಳನ್ನು ಹೋಲುತ್ತಿದ್ದರೆ ಅದು ಆಕಸ್ಮಿಕವಷ್ಟೆ! ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳದ ಎಲ್ಲಾ ಪ್ರತಿಪಾದಕರೂ ಈ ನಾಟಕವನ್ನು ಅವಶ್ಯವಾಗಿ ನೋಡಲೇಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.