ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟವಾಗಿದ್ದೇ ತಡ ಎಲ್ಲ ಪಕ್ಷಗಳೂ ‘ಹಂಚುವ ಕೆಲಸ’ಕ್ಕೆ ವೇಗ ತುಂಬಿವೆ. ನೀತಿ ಸಂಹಿತೆ ಎಂಬುದು ಲೆಕ್ಕಕ್ಕೇ ಇಲ್ಲ. ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಎಗ್ಗಿಲ್ಲದೆ ಸಾಗಿದೆ. ಸೀರೆ, ಕುಕ್ಕರ್, ಟಿ.ವಿ., ಹಣ ಹಂಚುವ ಕೆಲಸ ಅಬಾಧಿತವಾಗಿ ನಡೆದಿದೆ. ಕೆಲವರು ಸಿಕ್ಕಿಬಿದ್ದಿದ್ದಾರೆ. ಆದರೆ ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇವೆಲ್ಲ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅದನ್ನು ಪ್ರಶ್ನಿಸಬೇಕಾದ ಮತದಾರ ಪ್ರಭುಗಳು ಮೌನವಾಗಿರುವುದು ವಿಪರ್ಯಾಸವೇ ಸರಿ.
ಮತದಾರರಿಗೆ ಆಮಿಷವೊಡ್ಡಿ ಅವರ ಆಶೋತ್ತರಗಳ ಜೊತೆ ರಾಜಕಾರಣಿಗಳು ಚೆಲ್ಲಾಟ ಆಡುತ್ತಿದ್ದಾರೆ. ಮತದಾರರು ಇಂತಹ ಆಮಿಷಗಳಿಗೆ ಒಳಗಾಗಬಾರದು. ತಮ್ಮ ಅಮೂಲ್ಯ ಮತ ಮಾರಿಕೊಳ್ಳಬಾರದು. ಇದು ಸಾಧ್ಯವಾದರೆ, ನಾಡಿನ ಭವ್ಯ ಭವಿಷ್ಯಕ್ಕೆ ಬೇಕಾದ ಸಭ್ಯ, ಉತ್ತಮ, ಜನಪರ ಕಾಳಜಿಯುಳ್ಳ ವ್ಯಕ್ತಿಗಳು ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಬದಲಾವಣೆ ಜನರಿಂದಲೇ ಶುರುವಾಗಬೇಕು. ಅದು ಈ ಚುನಾವಣೆಯಿಂದಲೇ ಶುರುವಾಗಲಿ.
–ಶ್ವೇತಾ ಎನ್., ಸೊರಬ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.