ADVERTISEMENT

ಭ್ರಷ್ಟ ವ್ಯವಸ್ಥೆಗೆ ಹೆದರಿ ಪಿ.ಡಿ.ಒಗಳ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:05 IST
Last Updated 16 ಫೆಬ್ರುವರಿ 2011, 16:05 IST

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಳ್ಳಿ ರಾಜಕೀಯಕ್ಕೆ ಹೆದರಿ ಹಳೆಯ ಕೆಲಸಕ್ಕೆ ವಾಪಸ್ಸು ಹೋಗುತ್ತಿರುವ ಬಗೆಗಿನ ವರದಿ (ಫೆ.16) ಸಕಾಲಿಕ ಮತ್ತು ವಾಸ್ತವ. ರಾಜ್ಯದಾದ್ಯಂತ 200 ಕ್ಕೂ ಹೆಚ್ಚು ಪಿ.ಡಿ.ಓ ಗಳು ರಾಜೀನಾಮೆ ನೀಡಿದ್ದು, ಇವರೆಲ್ಲರು ಭ್ರಷ್ಟಚಾರ ವಿರೋಧಿಗಳು ಎಂಬುವುದನ್ನು ಗಮನಿಸಬೇಕಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆಯಲ್ಲಿರುವ ಸಂಘಟಿತ ಭ್ರಷ್ಟಾಚಾರ ಮತ್ತು ಜನಪ್ರತಿನಿಧಿಗಳ ಕಾನೂನು ಬಾಹಿರ ಒತ್ತಡಗಳ ಹಿನ್ನೆಲೆಯಲ್ಲಿ ಹಲವಾರು ಪಿ.ಡಿ.ಓ ಗಳು ಹಳೆಯ ಕೆಲಸಕ್ಕೆ ವಾಪಸ್ಸು ಹೋಗಲು ಅನುಮತಿ ಕೋರಿದ್ದಾರೆ. ಪ್ರಮುಖವಾಗಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳು, ಕಾನೂನು ಬಾಹಿರ ಕೆಲಸ ನಿರ್ವಹಿಸಲು ಜನಪ್ರತಿನಿಧಿಗಳಿಂದ ಒತ್ತಡ ಮತ್ತು ನಿಗದಿತ ಕಪ್ಪಕಾಣಿಕೆಗಳಿಗಾಗಿ ನಡೆಸುತ್ತಿರುವ ಸಭೆಗಳಿಂದಾಗಿ ಪಿ.ಡಿ.ಓ ಗಳು ಬೇಸತ್ತಿದ್ದಾರೆ.

ಪಿ.ಡಿ.ಓ ಗಳು ನೇಮಕಾತಿಯಾದ ಮೇಲೆ ಅಭಿವೃದ್ದಿ ಕುಂಠಿತವಾಗಿದೆ ಎಂದು ಅರೋಪಿಸುವ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಜೊತೆಗೆ ಹೊಂದಿಕೊಂಡು ಹೋಗಲು ಪುಸಲಾಯಿಸುತ್ತಿದ್ದಾರೆ. ಪಿ.ಡಿ.ಓ ಗಳು ರಾಜೀನಾಮೆ ಸಲ್ಲಿಸಲು ವ್ಯಯಕ್ತಿಕ ಕಾರಣ ನೀಡಿರುವುದು ನಿಜವಲ್ಲ. ಸಂಘಟಿತ ಭ್ರಷ್ಟಚಾರಕ್ಕೆ ಮನನೊಂದು ವ್ಯವಸ್ಥೆಯಿಂದ ದೊರವಿರಲು ಮನಸ್ಸು ಮಾಡಿದ್ದಾರೆ ಅಷ್ಟೆ.

ಕಮೀಷನ್ ವ್ಯವಹಾರ, ತುಂಡು ಗುತ್ತಿಗೆ ಕಾಮಗಾರಿಗಳನ್ನು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಕಾನೂನು ಬಾಹಿರವಾಗಿ ಜನಪ್ರತಿನಿಧಿಗಳು ನಿರ್ವಹಿಸುತ್ತಿರುವುದು ಮತ್ತು ಗ್ರಾಮ ಠಾಣಾ ಅಸ್ತಿಗಳ ಖಾತೆ ವಿಚಾರವಾಗಿ ಕಾನೂನಿನಲ್ಲಿರುವ ಗೂಂದಲಗಳು ಭ್ರಷ್ಟಚಾರದ ಮೂಲಗಳಾಗಿದ್ದು, ಈ ವಿಚಾರದಲ್ಲಿ ಯಾರ ಮೇಲು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಅಸಾಧ್ಯವಾಗಿದೆ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ದೇವರೆ ಕಾಪಾಡಬೇಕಾಗಿದೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.