ಹಲವಾರು ವರ್ಷಗಳಿಂದ ದುರಸ್ತಿಯಿಲ್ಲದೆ, ಅನೇಕ ಬಾರಿ ಅಪಘಾತಗಳಿಗೆ ಕಾರಣವಾಗಿರುವ ರಾಷ್ಟ್ರೀಯ ಹೆದ್ದಾರಿ 17ನ್ನು ಚತುಷ್ಪಥ ರಸ್ತೆ ಮಾಡುವುದು ಜನತೆಗೆ ಅಪಾರ ಸಂತೋಷವನ್ನುಂಟು ಮಾಡಿತ್ತು. ಇದಕ್ಕಾಗಿ ಈಗಾಗಲೇ ರಸ್ತೆ ಬದಿಯಲ್ಲಿರುವ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿಗೆ ತಮ್ಮ ಜಮೀನಿನ ಹೆಚ್ಚಿನ ಭಾಗವನ್ನು ಬಿಟ್ಟು ಕೊಟ್ಟಿರುತ್ತಾರೆ. ಈಗ ಉಳಿದಿರುವುದು ಕೇವಲ ಮನೆ ಮಾತ್ರ.
ಸಾಮಾನ್ಯವಾಗಿ ಎಲ್ಲರೂ ಮನೆ ಕಟ್ಟುವ ಮೊದಲು ಯೋಚಿಸುವುದು, ತಮ್ಮ ಮನೆ, ನಾವು ಕೆಲಸ ಮಾಡುವ ಸ್ಥಳಕ್ಕೆ, ಶಾಲೆಗೆ, ಪೇಟೆಗೆ ಹತ್ತಿರವಾಗಿರಬೇಕೆಂದು. ಆದರೆ ಸರ್ಕಾರ ಅಧಿಕಾರದ ಬಲದಿಂದ, ಇರುವ ಜಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡರೆ, ಜನರ ಮೂಲಭೂತ ಸೌಕರ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ಇಲ್ಲಿ ಯಾರು ಅನಧಿಕೃತವಾಗಿ ಮನೆಯನ್ನು ಕಟ್ಟಿಲ್ಲ. ತಮ್ಮ ಸ್ವಂತ ದುಡಿಮೆಯಿಂದ, ಕಷ್ಟಪಟ್ಟು ಕಟ್ಟಿದ ಮನೆಯನ್ನು ಕೆಡವುದರಿಂದ ಅಮಾಯಕ ಕುಟುಂಬಗಳು ಬೀದಿಪಾಲಾಗುತ್ತಿವೆ.
ಕೇರಳ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಕೇವಲ 40 ಮೀಟರ್ ಭೂ ಸ್ವಾಧೀನ ಮಾಡಿ ಸುಸಜ್ಜಿತ ರಸ್ತೆ ಮಾಡಲಾಗಿದೆ. ಸುರತ್ಕಲ್ನಲ್ಲಿ ಕೂಡ 45 ಮೀಟರ್ನೊಳಗೇ ರಸ್ತೆ ಮಾಡಿರುವಾಗ, ಉಡುಪಿ ಜನತೆಯನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದು ದುರದೃಷ್ಟಕರ.
ಈಗಾಗಲೇ ಕರಾವಳಿಯ ಜನರು ಈ ಸಮಸ್ಯೆಯ ಬಗೆಗೆ ರಾಜಕೀಯ ನಾಯಕರಿಗೆ ಮನವರಿಕೆ ಮಾಡಿದರೂ ಕೂಡ ಮುಖ್ಯಮಂತ್ರಿಗಳು 60 ಮೀಟರ್ ಭೂ ಸ್ವಾಧೀನಕ್ಕೆ ಸಮ್ಮತಿ ನೀಡಿರುವುದು ಕರಾವಳಿ ಜನರಿಗೆ ಮಾಡಿದ ಅನ್ಯಾಯ.ಈ ಯೋಜನೆ ಕೇಂದ್ರ ಸರ್ಕಾರದ ನೀತಿಯೆಂದು ರಾಜ್ಯ ಸರ್ಕಾರ ತನ್ನ ಹೊಣೆಯಿಂದ ಜಾರಿಕೊಳ್ಳುವುದು ಸರಿಯಲ್ಲ.
ಸರ್ಕಾರ ಪ್ರಕಟಿಸಿದ ಪ್ರಕಾರ ಈ ರಸ್ತೆ ವಿಸ್ತರಣೆಯಿಂದ ಹತ್ತಾರು ಶಾಲೆಗಳ ಕಟ್ಟಡಗಳು ನಾಶವಾಗಲಿವೆ. ಸಂಪರ್ಕ ರಸ್ತೆಗಳು ಇಲ್ಲದೆ ಕುಂದಾಪುರದ ಜನರು ಪರದಾಡುತ್ತಿರುವುದರಿಂದ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಇದಕ್ಕೆ ಸರ್ಕಾರದ ತಪ್ಪು ನೀತಿಯೇ ಕಾರಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.