ADVERTISEMENT

ವಿದೇಶಿ ಬಂಡವಾಳ ಬೇಕೇ?

ತಡಗಳಲೆ ಸುರೇಂದ್ರ ಬೆಂಗಳೂರು
Published 27 ಸೆಪ್ಟೆಂಬರ್ 2012, 19:30 IST
Last Updated 27 ಸೆಪ್ಟೆಂಬರ್ 2012, 19:30 IST

ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ದೈತ್ಯ ಬಹುರಾಷ್ಟ್ರೀಯ ವ್ಯಾಪಾರೀ ಸಂಸ್ಥೆಗಳು ನುಗ್ಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಬೇರೆ ಬೇರೆ ದೇಶಗಳ ಅನುಭವವೇ ಸಾರಿ ಹೇಳುತ್ತವೆ.

ಲ್ಯಾಟಿನ್ ಅಮೆರಿಕಾ, ರಷ್ಯಾ, ಥೈಲ್ಯಾಂಡ್, ಮಲೇಶಿಯಾ, ಇಂಡೋನೇಶಿಯ ಮುಂತಾದ ದೇಶಗಳಲ್ಲಿ ದೈತ್ಯ ಬಹುರಾಷ್ಟ್ರೀಯ  ಕಂಪನಿಗಳಾದ ವಾಲ್‌ಮಾರ್ಟ್, ಟ್ರೆಸೊ, ಕರೆಫೋರ್, ಮೆಟ್ರೊಗಳ ಪ್ರವೇಶಗಳಿಂದಾಗಿ ದೊಡ್ಡ ಸಂಖ್ಯೆಯ ಪಾರಂಪರಿಕ ಅಂಗಡಿಗಳು ಮುಚ್ಚಿ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ.

ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದೇ ಅಲ್ಲಿಯ ರೈತಾಪಿ ಜನಗಳೂ ಕಂಗಾಲಾಗಿದ್ದಾರೆ. ಗ್ರಾಹಕರ ಅನುಭವ ವಿಭಿನ್ನವೇನಲ್ಲ. ಅದ್ದರಿಂದ ಯಾವುದೇ ದಿಕ್ಕಿನಿಂದ ನೋಡಿದರೂ ಈ ವಿದೇಶಿ ದೈತ್ಯ ಕಂಪನಿಗಳ ಪ್ರವೇಶ ಯಾರಿಗೂ ಅನುಕೂಲ ಮಾಡಲು ಸಾಧ್ಯವಿಲ್ಲ.

ಮುಂದುವರಿದ ದೇಶಗಳಲ್ಲಿ ಈಗಾಗಲೇ ವ್ಯಾಪಾರದಲ್ಲಿ ಕುಸಿತ ಕಂಡ ಈ ದೈತ್ಯ ಕಂಪನಿಗಳು ತಮ್ಮ ಲಾಭಕ್ಕಾಗಿ ನಮ್ಮಂಥ  ಹಸಿರು ಹುಲ್ಲುಗಾವಲು  ದೇಶಗಳತ್ತ ಮುಖ ಮಾಡಿವೆ. ನಮ್ಮ ಸರ್ಕಾರಗಳ ಕೈ ತಿರುಚಿ ಒತ್ತಡ ಹೇರುತ್ತಿವೆ ಕೂಡ.

ನಮ್ಮ ಪ್ರಧಾನ ಮಂತ್ರಿಗಳಿಗೆ ಭಾರತೀಯ ಪ್ರಜೆಗಳ ಬದುಕಿಗಿಂತ ವಿದೇಶಿ ಅದರಲ್ಲೂ ಅಮೆರಿಕಾದ ದೊಡ್ಡಣ್ಣನ ಮಾತೇ ವೇದವಾಕ್ಯ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಜನರ ಜೀವ ಹಿಂಡುವ ಅದೇ ನೀತಿಗಳನ್ನು ಸರ್ಕಾರ ಮುಂದುವರಿಸುತ್ತಿದ್ದರೆ  `ಪ್ರಜಾವಾಣಿ~  ಸರ್ಕಾರದ ಕಿವಿ ಹಿಂಡಿ ಬುದ್ಧಿ ಹೇಳಬೇಕೆಂದು ನಾವು ಬಯಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.