ADVERTISEMENT

ಶಿಕ್ಷಣ ಮಾನದಂಡವೇ?

ಸುಶಾಂತ್ ಬನಾರಿ, ಪುತ್ತೂರು
Published 11 ಜೂನ್ 2018, 20:16 IST
Last Updated 11 ಜೂನ್ 2018, 20:16 IST

ಎಂಟನೇ ತರಗತಿವರೆಗಷ್ಟೇ ಓದಿರುವ ಜಿ.ಟಿ‌. ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಟ್ಟ ಬಗ್ಗೆ ವಿದ್ಯಾವಂತರು ಎನಿಸಿಕೊಂಡ ಹಲವರು ಕುಹಕವಾಡಿದ್ದಾರೆ. ಇದು ಇಂದಿನ ವಿದ್ಯಾವಂತಿಕೆಯನ್ನು ನಾಜೂಕಾಗಿ ವಿಡಂಬನೆ ಮಾಡುತ್ತಿದೆ.

ಜನಪ್ರತಿನಿಧಿ, ಮಂತ್ರಿಗಳು ಈ ದೇಶದ ಆಡಳಿತವನ್ನು ಪೂರ್ತಿ ನಡೆಸುವವರಲ್ಲ. ಅದನ್ನು ಮಾಡಲು ಬೃಹತ್ ಆಡಳಿತ ಯಂತ್ರವಿದೆ. ಮಂತ್ರಿಯಾದವ ಆ ಯಂತ್ರದ ಒಂದು ಸಣ್ಣ ಭಾಗ, ಆಡಳಿತ ಎಂಬುದು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕಾದ್ದು ಅವನ ಜವಾಬ್ದಾರಿ. ಆದರೆ ನಮ್ಮಲ್ಲಿ ಅದನ್ನು ಅರ್ಥೈಸಿಕೊಳ್ಳದೆಯೂ ವಿದ್ಯಾವಂತರಾಗಬಹುದು!

ರಕ್ಷಣಾ ಮಂತ್ರಿಯಾಗುವಾತ ಮಿಲಿಟರಿ‌ ಕಮಾಂಡರ್ ಆಗಿರಬೇಕಿಲ್ಲ, ಗೃಹ ಮಂತ್ರಿ ಪೊಲೀಸ್ ಕಮಿಷನರ್ ಅಲ್ಲ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹೋಟೆಲಿನವರ ಬಳಿ‌ ಇರುವುದಿಲ್ಲ, ಇರಬಾರದು ಕೂಡ. ಹಾಗೆ ನೋಡಿದರೆ ಒಬ್ಬ ಕಮಾಂಡರ್, ಒಬ್ಬ ಕಮಿಷನರ್, ಓರ್ವ ಹೋಟೆಲ್ ಉದ್ಯಮಿ ಮಂತ್ರಿಯಾಗುವ ಅರ್ಹತೆ ಹೊಂದಿರುವುದಿಲ್ಲ. ಆತ ತನ್ನ ಹುದ್ದೆ ಬಿಟ್ಟು ಬಂದು ಚುನಾವಣೆಯಲ್ಲಿ ಗೆದ್ದಾಗ ಆ ಅರ್ಹತೆ ಪಡೆಯುತ್ತಾನೆ.

ADVERTISEMENT

ಮುಜರಾಯಿ ಇಲಾಖೆಗೆ ಬ್ರಾಹ್ಮಣರನ್ನೇ ನೇಮಿಸಬೇಕು‌ ಎಂಬುದು ಎಷ್ಟು ಅಪಸವ್ಯವೋ ಉನ್ನತ ಶಿಕ್ಷಣ ಖಾತೆಯ ಹೊಣೆಯನ್ನು ಉನ್ನತ ಶಿಕ್ಷಣ ಪಡೆದಾತನೇ ವಹಿಸಬೇಕು ಎಂಬುದೂ ಅಷ್ಟೇ ಮೂರ್ಖತನ. ವಿದ್ಯಾವಂತರು ಎನಿಸಿಕೊಂಡವರಿಗೆ ಇದು ಗೊತ್ತಿಲ್ಲದೆ ವಿಡಂಬನೆ ಮಾಡುತ್ತಿದ್ದಾರೆ. ಆದರೆ ಆ ವಿಡಂಬನೆಗಳು ಮೂಲತಃ ಅವರೆಡೆಗೇ ಬೊಟ್ಟು ಮಾಡುತ್ತಿರುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.