ಶಿವಮೊಗ್ಗ- ಮೈಸೂರು ಪ್ಯಾಸೆಂಜರ್ ರೈಲು ಶಿವಮೊಗ್ಗವನ್ನು ಬೆಳಿಗ್ಗೆ 7-30ಕ್ಕೆ ಬಿಟ್ಟು ಬೀರೂರಿಗೆ 9ಕ್ಕೆ ತಲುಪುತ್ತದೆ. ಈ ರೈಲನ್ನು ಸಿದ್ದಗಂಗಾ ಇಂಟರ್ ಸಿಟಿ ರೈಲಿಗೆ ಸಂಪರ್ಕ ಪ್ಯಾಸೆಂಜರ್ ರೈಲಾಗಿ ಈ ಹಿಂದೆ ಶಿವಮೊಗ್ಗವನ್ನು 8-10ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲಿನ ಬದಲಾಗಿ ಬಿಡಲಾಗಿದೆ.
ಆದರೆ ಈ 7-30ರ ಸಮಯ ಮಲೆನಾಡಿನ ಭಾಗವಾದ ತೀರ್ಥಹಳ್ಳಿ ಹೊಸನಗರ, ಸಾಗರ, ಸೊರಬ, ಶಿಕಾರಿಪುರ ಮುಂತಾದ ಕಡೆಗಳಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದು ತಲುಪಲು ಕಷ್ಟವಾಗಿದೆ. ಈ ಹಿಂದೆ ಇದೇ ಪ್ಯಾಸೆಂಜರ್ ರೈಲು ಬೆಳಿಗ್ಗೆ 8-10ಕ್ಕೆ ಶಿವಮೊಗ್ಗ ಬಿಟ್ಟು ಬೀರೂರು ತಲುಪಿ ಅಲ್ಲಿಂದ ಸಿದ್ದಗಂಗಾ ಇಂಟರ್ಸಿಟಿಯಲ್ಲಿ ಬೆಂಗಳೂರು ತಲುಪಲು ಅನುಕೂಲವಾಗುತ್ತಿತ್ತು.
ಆದರೆ ಈಗಿನ ಪ್ಯಾಸೆಂಜರ್ ರೈಲು 7-30ಕ್ಕೆ ಶಿವಮೊಗ್ಗ ಬಿಡುವುದರಿಂದ ಮಲೆನಾಡಿನ ಭಾಗದಿಂದ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬಂದು ಸೇರಲು ಬಹಳ ಅನಾನುಕೂಲವಾಗಿದೆ. ಅಲ್ಲದೆ ಬೀರೂರಿನಲ್ಲಿ 9ಕ್ಕೆ ತಲುಪಿ ಇಂಟರ್ಸಿಟಿ ರೈಲಿಗೆ 9-45ರ ವರೆಗೆ ಕಾಯಬೇಕಾಗಿದೆ.
ಆದುದರಿಂದ 7-30ಕ್ಕೆ ಬಿಡುವ ಪ್ಯಾಸೆಂಜರ್ ರೈಲನ್ನು ಬೆಳಿಗ್ಗೆ 8ಕ್ಕೆ ಶಿವಮೊಗ್ಗವನ್ನು ಬಿಟ್ಟು ಬೀರೂರು 9-15ಕ್ಕೆ ತಲುಪುವಂತೆ ಮಾಡಿದರೆ ಮಲೆನಾಡಿನ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ.
ಹಾಗೆಯೇ ಸಂಜೆ ಬೆಂಗಳೂರಿನಿಂದ ಬೀರೂರಿಗೆ 4-20ಕ್ಕೆ ಬರುವ ಸಿದ್ದಗಂಗಾ ಇಂಟರ್ಸಿಟಿ ರೈಲಿನಲ್ಲಿ ಬಂದ ಪ್ರಯಾಣಿಕರು ಇದೇ ಪ್ಯಾಸೆಂಜರ್ ರೈಲಿಗೆ ಸಂಜೆ 6 ಗಂಟೆವರೆಗೆ ಬೀರೂರಿನಲ್ಲಿ ಕಾಯಬೇಕಾಗಿದೆ. ವಯೋವೃದ್ಧರು, ಮಹಿಳೆಯರು ಬೀರೂರಿನಲ್ಲಿ 4-20 ರಿಂದ 6ರ ವರೆಗೆ ಅನಿವಾರ್ಯವಾಗಿ ಕಾಯಬೇಕಾದ ಪರಿಸ್ಥಿತಿ ಯಿಂದಾಗಿ ಶಿವಮೊಗ್ಗದಿಂದ ಮಲೆನಾಡಿನ ಭಾಗಕ್ಕೆ ಹೋಗುವ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ.
ಆದುದರಿಂದ ದಯಮಾಡಿ ಸಂಜೆಯ ಪ್ಯಾಸೆಂಜರ್ ರೈಲು ಬೀರೂರನ್ನು ಸಂಜೆ 5 ಗಂಟೆಗೆ ಹೊರಡುವಂತೆ ಸಮಯವನ್ನು ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.