ರಾಷ್ಟ್ರದಲ್ಲಿ ಲೋಕಸಭೆ– ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ. ರಾಷ್ಟ್ರಪತಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಹಣ ಹಾಗೂ ಇತರೆ ಸಂಪನ್ಮೂಲಗಳು ಉಳಿಯುತ್ತವೆ ಎಂಬ ಸಮರ್ಥನೆಯನ್ನು ಮುಂದೆ ಮಾಡಿ ಇದನ್ನು ಕ್ರಿಯೆಗಿಳಿಸಲು ಮಾನಸಿಕವಾಗಿ ಅಣಿಯಾಗುತ್ತಿರುವಂತಿದೆ. ಇದು ವಿಷಾದನೀಯ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನ ಸ್ಥಿತಿಗೂ ಈಗಿನ ಸ್ಥಿತಿಗೂ ಅಜ–ಗಜಾಂತರ ಇದೆ. ರಾಜಕೀಯ–ಶೈಕ್ಷಣಿಕ–ಸಾಮಾಜಿಕ ಬದಲಾವಣೆ ದೇಶದ ನಾಗರಿಕರನ್ನು ಸ್ವತಂತ್ರವಾಗಿ ಚಿಂತಿಸುವಂತೆ, ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ರಾಜಕೀಯ ಫಲಿತಾಂಶಗಳು ಬೇರೆ ಬೇರೆ ನೆಲೆಯಲ್ಲಿ ತೀರ್ಮಾನವಾಗುತ್ತಿವೆ. ಲೋಕಸಭೆ, ವಿಧಾನಸಭೆ ಫಲಿತಾಂಶ ಅತಂತ್ರವಾದಾಗ, ಬಹುಮತ ಏರುಪೇರಾದಾಗ ಮಧ್ಯಂತರ ಚುನಾವಣೆ ಎದುರಾಗುತ್ತದೆ. ಅದೇ ಪ್ರಜಾಪ್ರಭುತ್ವದ ಸೌಂದರ್ಯ.
ಈ ಹಿನ್ನೆಲೆಯಲ್ಲಿ ಆಯಾ ರಾಜ್ಯ ಸರ್ಕಾರದ ಅಧಿಕಾರದ ಅವಧಿ ಮುಗಿದ ಮೇಲೆಯೇ ಚುನಾವಣೆ ನಡೆಸುವುದು ಸೂಕ್ತ. ಏಕಕಾಲದ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ಗಂಡಾಂತರವೇ ಸರಿ. ಹಾಗಾಗಿ ದೇಶದಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಸುವುದರ ಬಗ್ಗೆ ಯೋಚಿಸುವುದಕ್ಕಿಂತ ಏಕರೂಪದ ಸರ್ವಸಮಾನ ಶಿಕ್ಷಣವನ್ನು ಜಾರಿ ಮಾಡುವ ದಿಕ್ಕಿನಲ್ಲಿ ಯೋಚಿಸಲಿ.
ಎಂ. ಮಂಚಶೆಟ್ಟಿ, ಕಡಿಲುವಾಗಿಲು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.