ಕೇಂದ್ರ ಸರ್ಕಾರದಿಂದ ನೇಮಕಗೊಳ್ಳುವ ರಾಜ್ಯಪಾಲರು ಯಾವುದೇ ಒಂದು ಪಕ್ಷಕ್ಕೆ ಸೇರಿದವರೇ ಆಗಿದ್ದರೂ ಪಕ್ಷಾತೀತವಾಗಿ ನಡೆದುಕೊಳ್ಳಬೇಕಾದುದು ಅವರ ಧರ್ಮ. ತಮ್ಮನ್ನು ನೇಮಿಸಿದ ಸರ್ಕಾರಕ್ಕೆ ಖುಷಿ ಕೊಡುವುದಕ್ಕೆ ಆಯಾ ರಾಜ್ಯಗಳಲ್ಲಿರುವ ಬೇರೆ ಪಕ್ಷಗಳ ಸರ್ಕಾರಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿರುವುದು ಇದಕ್ಕೆ ನಿದರ್ಶನ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಸರ್ಕಾರವೇ ನೇಮಿಸಬೇಕಾದ ಅಗತ್ಯವಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವುದು ಆಘಾತಕಾರಿ. ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಾರತೀಯರಾದ ಎಲ್ಲರಿಗೂ ಗೌರವ ಇದೆ. ರಾಜ್ಯಪಾಲರ ಮೇಲೆ ಏರುವ ಒತ್ತಡ ತಂತ್ರಗಳನ್ನು ನ್ಯಾಯಮೂರ್ತಿಗಳ ಮೇಲೂ ಹೇರುವುದರಲ್ಲಿ ಸರ್ಕಾರಗಳು ಹಿಂದೆ ಬೀಳುವುದಿಲ್ಲ. ಹೀಗಾಗಿ, ಈಗಿನ ರೀತಿಯಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ಮೂಲಕವೇ ನ್ಯಾಯಮೂರ್ತಿಗಳ ನೇಮಕ ಆಗುವುದು ಒಳ್ಳೆಯದು.
–ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.