ADVERTISEMENT

ರಂಗೋಲಿ ಕೆಳಗೆ ನುಸುಳುವ ಮಂತ್ರಶಕ್ತಿ ಇದೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:30 IST
Last Updated 17 ಡಿಸೆಂಬರ್ 2020, 19:30 IST

ಬೃಹತ್ ನೀರಾವರಿ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂಪಾಯಿ ಗುಳುಂ ಆಗಿರುವ ಸುದ್ದಿ (ಪ್ರ.ವಾ., ಡಿ. 17)
ಆಘಾತಕಾರಿಯಾದುದೇನೂ ಅಲ್ಲ! ಯಾಕೆಂದರೆ ಜಲಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಎಲ್ಲರಿಗೂ ತಿಳಿದ ವಿಷಯವೇ. ದರಪಟ್ಟಿಗಳಲ್ಲಿ ಏರುಪೇರು, ವಿಳಂಬದ ಕಾಮಗಾರಿಗೆ ಏರಿದ ಬೆಲೆಗಳ ನೆಪ... ಹೀಗೆ ಹಲವಾರು ಹಂತಗಳಲ್ಲಿ ಟೆಂಡರ್ ಮೊತ್ತವನ್ನು ಹಿಗ್ಗಿಸುವುದರಲ್ಲಿ ಅಲ್ಲಿರುವವರು ನಿಸ್ಸೀಮರೆ. ಇಂತಹವರಿಗೆ ಕಾಮಗಾರಿಗಳ ಸಕಾಲಿಕ ಅನುಷ್ಠಾನ, ನಿಯತ್ತು, ಸಾರ್ವಜನಿಕರ ಟೀಕೆ, ಟಿಪ್ಪಣಿಗಳ ಬಗ್ಗೆ ಅಂಜಿಕೆ ಎಲ್ಲ ಎಲ್ಲಿ ಬರಬೇಕು?

ಈ ಪ್ರಹಸನದ ಮುಂದುವರಿದ ಭಾಗವಾಗಿ ಸತ್ಯಶೋಧನಾ ಸಮಿತಿಯ ನೇಮಕ, ತನಿಖೆ, ವಿಚಾರಣೆಗಳೆಲ್ಲ
ಒಂದು ರೀತಿಯಲ್ಲಿ ಕಣ್ಣೊರೆಸುವ ತಂತ್ರ. ಅಲ್ಲಿರುವ ಹುಳುಕುಗಳನ್ನು ಸಾಕ್ಷ್ಯಸಮೇತ ಎತ್ತಿ ತೋರಿಸಿದರೂ ಯಾವುದೋ ಮಾಯೆಯಿಂದ ರಂಗೋಲಿ ಕೆಳಗೆ ತೂರುವ ಚಾಣಾಕ್ಷತನವೇ ಮೆರೆಯುವುದು ಹೊಸ ವಿಷಯವೇನಲ್ಲ. ಅದಿಲ್ಲವಾದರೆ ಭ್ರಷ್ಟಾಚಾರದ ಸಂಬಂಧ ನೇಮಕಗೊಂಡ ಅದೆಷ್ಟು ಸಮಿತಿ, ತನಿಖೆಗಳ ವರದಿಗಳು ತಾರ್ಕಿಕ ಅಂತ್ಯ ಕಂಡಿವೆ? ಅಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದ ಸುದ್ದಿ ಇದೆಯೇ? ಈ ವಿಷವರ್ತುಲದಲ್ಲಿ ಪರಸ್ಪರ ಎಲ್ಲರನ್ನೂ ಕಾಪಾಡುವಂತಹ ಅಗೋಚರ ಕೃಪಾದೃಷ್ಟಿಯ ಪ್ರಖರತೆ ಎಷ್ಟಿರುತ್ತದೆಂದರೆ, ಯಾರೊಬ್ಬರೂ ಅಲ್ಲಿ ಏನೂ ಆಗಿಲ್ಲವೆಂಬಂತೆ ನಿರಾಳರಾಗಿ ಇರುತ್ತಾರೆ. ಇಂತಹ ವಂಚನೆಗಳನ್ನು ಮಟ್ಟ ಹಾಕುವುದಕ್ಕೆ ಪ್ರಬಲ ಇಚ್ಛಾಶಕ್ತಿ ಬೇಕು.

-ಧರ್ಮಾನಂದ ಶಿರ್ವ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.