ADVERTISEMENT

ವಾಚಕರ ವಾಣಿ: ನಿಷ್ಠಾವಂತರಿಗೆ ನ್ಯಾಯ ದೊರಕಿಸಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 19:30 IST
Last Updated 1 ಮೇ 2022, 19:30 IST

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರದಿಂದ, ನ್ಯಾಯಯುತವಾಗಿ ಆಯ್ಕೆಯಾದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಖಂಡಿತ ಅನ್ಯಾಯವಾಗುತ್ತದೆ. ಮನೆಯ ಜವಾಬ್ದಾರಿ ಹೊರುವ ವಯಸ್ಸಿನಲ್ಲಿ ಸರ್ಕಾರಿ ಹುದ್ದೆಯ ಕನಸನ್ನು ಹೊತ್ತು, ಸ್ನೇಹಿತರ ಜತೆ ರೂಮ್‌ನಲ್ಲಿ ಇದ್ದುಕೊಂಡು, ಆರ್ಥಿಕ ಸಂಕಷ್ಟಗಳ ನಡುವೆಯೇ ಹಗಲು ರಾತ್ರಿ ಎನ್ನದೆ ಮೂರ್ನಾಲ್ಕು ವರ್ಷಗಳಿಂದ ಓದಿದವರಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಸಂಬಂಧ ಸುಮಾರು 10 ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳಲ್ಲೇ ಅತಿ ಕಷ್ಟವಾದ ಪೇಪರ್ ಇದಾಗಿದ್ದು, ಇದೊಂದು ಮಿನಿ ಯುಪಿಎಸ್‌ಸಿ ಪರೀಕ್ಷೆ ಎಂದೇ ನಾವು ಸ್ಪರ್ಧಾರ್ಥಿಗಳು ಮಾತನಾಡಿಕೊಂಡಿದ್ದೆವು. ಈಗ ಆಯ್ಕೆಯಾದವರಲ್ಲಿ ಯುಪಿಎಸ್‌ಸಿ, ಕೆಎಎಸ್‌ಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ ಹೆಚ್ಚಿನವರಾಗಿದ್ದಾರೆ.

ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ಇದೆಯೆಂದು ಎಸ್‌ಡಿಎ, ಪಿ.ಸಿ.ಯಂತಹ ಅನೇಕ ಹುದ್ದೆಗಳಿಗೆ ಕೆಲವು ಅಭ್ಯರ್ಥಿಗಳು ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಿರ್ಧಾರ ಕೈಗೊಂಡರೆ ಅಭ್ಯರ್ಥಿಗಳು ತಮ್ಮ ಕನಸಿನ ಹುದ್ದೆಯೂ ಇಲ್ಲದೆ, ಇರುವ ಹುದ್ದೆಯನ್ನೂ ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒಮ್ಮೆ ಆಯ್ಕೆಯಾದವರು ಮತ್ತೆ ಆಯ್ಕೆಯಾಗುತ್ತಾರೆ ಎಂಬ ಖಾತರಿ ಇರುವುದಿಲ್ಲ. ವಯೋಮಿತಿ ಮೀರುತ್ತಿರುವವರ ಗತಿಯೇನು? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ಎಷ್ಟು ಸರಿ? ಅಕ್ರಮದ ವಿರುದ್ಧ ಸಿಐಡಿ ತನಿಖೆಯನ್ನು ಚುರುಕುಗೊಳಿಸಲಿ. ಅಕ್ರಮ ಎಸಗಿದವರಿಗೆ ಶಿಕ್ಷೆ ಕೊಡಿಸುವುದರ ಜೊತೆಗೆ ನಿಷ್ಠಾವಂತ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವುದು ಸರ್ಕಾರದ ಕರ್ತವ್ಯ.

- ಚೈತ್ರ ಬಸವರಾಜಪ್ಪ,ಜಾಲಿಕಟ್ಟಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.