ಕೋವಿಡ್ ಸಾವಿನ ಸಂಖ್ಯೆ ಸಂಬಂಧದಲ್ಲಿ ಭಾರತ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಯ ವಿಧಾನಗಳನ್ನು
ಪ್ರಶ್ನಿಸಿರುವುದು ostrich effect/ problem ಎಂಬ ಮನೋವೈಜ್ಞಾನಿಕ ತತ್ವವನ್ನು ನೆನಪಿಸುತ್ತದೆ. ಉಷ್ಟ್ರಪಕ್ಷಿ
ಗಳು ತಲೆಯನ್ನು ಉಸುಕಿನಲ್ಲಿ ಹುದುಗಿಸುವುದಿಲ್ಲ, ನಿಜ. ಆದರೆ ಗಂಡು ಪಕ್ಷಿಗಳು ತಮ್ಮ ಪ್ರದೇಶವನ್ನು ಆಕ್ರಾಮಕ ಶೈಲಿಯಲ್ಲಿ ರಕ್ಷಿಸಲು ಯತ್ನಿಸುತ್ತವೆ. ನಕಾರಾತ್ಮಕ ಮಾಹಿತಿಯನ್ನು ತಳ್ಳಿಹಾಕುವುದು (ಫೀಡ್ಬ್ಯಾಕ್ ಕೂಡಾ ಅಪಥ್ಯ!) ಕೆಲವರ ರೆಗ್ಯುಲರ್ ವರಸೆ.
ಡಬ್ಲ್ಯುಎಚ್ಒ ಹೇಳುವಂತೆ, ಭಾರತದಲ್ಲಿ ಅಧಿಕೃತ ಅಂಕಿಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಸಾವುಗಳು
ಸಂಭವಿಸದಿರಬಹುದು, ಆದರೆ ನಮ್ಮಲ್ಲಿ ಸಾವಿನ ದಾಖಲೀಕರಣವು ಶೇ 99.9ರಷ್ಟು ಇದೆ ಎನ್ನುವುದು ಉತ್ಪ್ರೇಕ್ಷಿತ ವಾದ. ತಾವು ದೇಶಪ್ರೇಮಿಗಳು ಎಂದು ತೋರಿಸಿಕೊಳ್ಳಬಯಸಿರುವ ಇಬ್ಬರು ಸಹ ಶೇ 10- 20 ಹೆಚ್ಚು ಇದ್ದೀತು ಎಂದಿರುವುದು ಗಮನಾರ್ಹ. ಸಂಗ್ರಹ ವಿಧಾನ ಹಾಗೂ ಮಾಡೆಲಿಂಗ್ ಕುರಿತು ಗೊತ್ತಿಲ್ಲದಿರುವವರೂ ಹದಿನಾರು ರಾಜ್ಯಗಳು ಕೋವಿಡ್ ಅವಧಿಯಲ್ಲಿ ‘ಎಲ್ಲ ಮಾಹಿತಿ ಸಿಕ್ಕಿಲ್ಲ’ ಎಂದು ಒಪ್ಪಿಕೊಂಡಿರುವುದನ್ನು ಪರಿಗಣಿಸಬೇಕಾಗುತ್ತದೆ. ಒಂದು ಸರ್ಕಾರಿ ಮೂಲವೇ (ಎನ್ಎಫ್ಎಚ್ ಸರ್ವೆ) ಶೇ 71 ನಿಖರ ಎಂದಿದೆ. ಭಾರತ ಇದನ್ನು ಪ್ರತಿಷ್ಠೆಯ ಪ್ರಶ್ನೆ ಮಾಡಬೇಕೇ?
ಕೆಲವು ಅಂಕಿಅಂಶಗಳನ್ನು ಉಲ್ಲೇಖಿಸಿ ‘ದೇಶ ಕೋವಿಡ್ ಮಹಾಮಾರಿಯ ದುಷ್ಪರಿಣಾಮಗಳಿಂದ ಚೇತರಿಸಿ ಕೊಂಡಿದೆ’ ಎಂದು ಪ್ರತಿಪಾದಿಸುವುದೂ ಶುರುವಾಗಿದೆ. ಅದೂ ಆತುರದ, ಅಪಕ್ವ ಮಾತು.
ಎಚ್.ಎಸ್.ಮಂಜುನಾಥ,ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.