ಸರ್ಕಾರಿ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಅಕ್ರಮಗಳ ಮಾಹಿತಿಯು ಇಡೀ ವ್ಯವಸ್ಥೆಯ ಬಗ್ಗೆ ಹೇಸಿಗೆ ತರಿಸುವಂತಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಅತ್ಯಂತ ಕಳಪೆಮಟ್ಟದ್ದಾಗಿತ್ತು.
ಪ್ರತಿಭಾವಂತ ಅಭ್ಯರ್ಥಿಗಳು ಆಯ್ಕೆಯಾಗಬೇಕೆಂದು ಪರೀಕ್ಷೆ ನಡೆಸಿದಂತೆ ಇರಲಿಲ್ಲ. ಪ್ರಶ್ನೆಗಳು ಕನಿಷ್ಠಪಕ್ಷ ಕೆ-ಸೆಟ್, ನೆಟ್ ಮಟ್ಟದಲ್ಲಿ ಇದ್ದಿದ್ದರೂ ವಿಷಯಜ್ಞಾನ ಹೊಂದಿದ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವ ಅವಕಾಶ ಹೆಚ್ಚಾಗಿರುತ್ತಿತ್ತು. ಇಂತಹ ಕಳಪೆಮಟ್ಟದ ಪರೀಕ್ಷಾ ವಿಧಾನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಎಂತಹ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುತ್ತಾರೋ ಎಂಬುದನ್ನು ಊಹಿಸಿದರೆ ಭಯವಾಗುತ್ತದೆ. 2016ರಲ್ಲಿ ಪ್ರಾಧಿಕಾರ ನಡೆಸಿದ ನೇಮಕಾತಿ ಉತ್ತಮ ಮಟ್ಟದ್ದಾಗಿತ್ತು. ಆಯ್ಕೆಯಾಗದ ಅಭ್ಯರ್ಥಿಗಳಿಗೂ ಒಳ್ಳೆಯ ಪರೀಕ್ಷೆ ಬರೆದ ಅನುಭವವಾಗಿತ್ತು. ಆದರೆ ಪ್ರಸ್ತುತ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಗಮನಹರಿಸಿ, ಮರುಪರೀಕ್ಷೆ ನಡೆಸುವ ಮೂಲಕ ಪ್ರಾಧಿಕಾರದ ಗೌರವವನ್ನು ಕಾಪಾಡಬೇಕು. ಅಲ್ಲದೆ, ವ್ಯವಸ್ಥೆಯ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ.
ಭಾನುಪ್ರಕಾಶ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.