ADVERTISEMENT

ವಾಚಕರ ವಾಣಿ: ಹಣದ ದುರಾಸೆಗೆ ಬೀಳುವ ಮುನ್ನ...

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 19:30 IST
Last Updated 17 ನವೆಂಬರ್ 2020, 19:30 IST

ಅಕ್ರಮ ಆಸ್ತಿ ಕುರಿತ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುವುದು ವಿಷಾದನೀಯ. ಸಮಾಜದ ತೊಡಕು, ತೊಂದರೆ ನಿವಾರಿಸಿ, ಅಭಿವೃದ್ಧಿಗೆ ಕೈಜೋಡಿಸಿ ಮಾದರಿಯಾಗಬೇಕಾದವರೇ ಮಾರಕವಾಗುತ್ತಿದ್ದಾರೆ. ಇದಕ್ಕೆ ಮಹಿಳಾ ಅಧಿಕಾರಿಗಳು ಕೂಡ ಹೊರತಾಗಿಲ್ಲ. ಅಧಿಕಾರಿಗಳು ತಮ್ಮ ಭಾಷಣಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಬರುತ್ತಿದ್ದ 50 ರೂಪಾಯಿ ಪಿಂಚಣಿಯಲ್ಲಿ ಅವರ ಪತ್ನಿ 10 ರೂಪಾಯಿ ಉಳಿಸುತ್ತಿದ್ದುದರಿಂದ, ತಮಗೆ 40 ರೂಪಾಯಿ ಪಿಂಚಣಿಯೇ ಸಾಕು, ಇನ್ನುಳಿದ ಹೆಚ್ಚುವರಿ ಹಣವನ್ನು ವಾಪಸ್‌ ಪಡೆಯಿರಿ ಎಂದು ಶಾಸ್ತ್ರಿಯವರು ಸರ್ಕಾರಕ್ಕೆ ಪತ್ರ ಬರೆದಿದ್ದ ಪ್ರಸಂಗವನ್ನು ಉದಾಹರಿಸುತ್ತಾರೆ. ಆದರೆ ಈ ಆದರ್ಶದಲ್ಲಿ ಕೊಂಚ ಕೂಡ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಸಮಾಜದ ಬಗ್ಗೆ ಕಳಕಳಿ ಹೊಂದಿದ್ದ ಅಧಿಕಾರಿಗಳು ಈ ಹಿಂದೆ ಕೆಲವರಾದರೂ ಇದ್ದರು. ಈಗಿನವರಲ್ಲಿ ಹೆಚ್ಚಿನವರು ಸ್ವಯಂ ಕಲ್ಯಾಣಕ್ಕಾಗಿ, ಹಣ, ಆಸ್ತಿಗಾಗಿ ಕೆಲಸ ಮಾಡುತ್ತಿದ್ದಾರೆ ಎನಿಸುತ್ತಿದೆ.

ಹಣದ ದುರಾಸೆಗೆ ಒಳಗಾಗುವ ಮೊದಲು, ‘ಹಣ ಎಂದರೆ ಉಪ್ಪು ಇದ್ದಂತೆ, ಅದನ್ನು ತುಸುವೇ ನಾಲಿಗೆ ಮೇಲೆ ಇರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ’ ಎನ್ನುವ ಶಿವರಾಮ ಕಾರಂತರ ಮಾತುಗಳನ್ನು ಸರ್ಕಾರಿ ನೌಕರರು, ಅಧಿಕಾರಿಗಳು ಅರಿತರೆ ದೇಶದ ಅಭಿವೃದ್ಧಿ ವೇಗ ಪಡೆಯಲು ಸಾಧ್ಯ.

-ಬಿ.ಎಸ್.ಚೈತ್ರ,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.