ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ 500ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ₹ 18 ಕೋಟಿ ಪಡೆದು ವಂಚಿಸಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ (ಪ್ರ.ವಾ., ಅ. 18).
ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಎಷ್ಟೇ ಪಾರದರ್ಶಕತೆ, ತಂತ್ರಜ್ಞಾನ ಹಾಗೂ ನೇರ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೆ ತರುವ ಪ್ರಯತ್ನಗಳಾಗಿದ್ದರೂ ಮತ್ತೆ ಮತ್ತೆ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕೆಲಸದ ಆಮಿಷ ಒಡ್ಡುವ ವಂಚಕರನ್ನು ಪಕ್ಕಕ್ಕಿಟ್ಟರೂ, ಅಡ್ಡದಾರಿಯಿಂದ ಆಯ್ಕೆಯಾಗ ಬಯಸುವ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ. ಇದು ಕೇವಲ ಕೆಎಸ್ಆರ್ಟಿಸಿಗೆ ಸೀಮಿತವಾಗಿಲ್ಲ. ಅನೇಕ ರೀತಿಯ ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿಕೊಳ್ಳಲು ಸಾಲ ಮಾಡಿಯೋ ಜಮೀನು, ಒಡವೆ, ಆಸ್ತಿ ಮಾರಿಯೋ ಲಂಚ ನೀಡಲು ಮುಂದಾಗುವ ಅಭ್ಯರ್ಥಿಗಳಿದ್ದಾರೆ.
ಇನ್ನು, ಇಂತಹ ಪ್ರಕರಣಗಳಲ್ಲಿ ತಾವು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಹಣ ನೀಡುವುದಾಗಿ ವಂಚಕರು ಹೇಳುತ್ತಾರೆ. ಅಂದರೆ ಒಂದಂತೂ ಸ್ಪಷ್ಟ. ಕಳ್ಳರು ಮನೆಯಲ್ಲಿಯೇ ಇರುತ್ತಾರೆ. ಒಳಗಿನವರ ಸಹಾಯವಿಲ್ಲದೆ ಒಳಗಿನಿಂದ ದಿಡ್ಡಿ ಬಾಗಿಲನ್ನು ತೆರೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕಳ್ಳರನ್ನು ಹಿಡಿಯುವುದೂ ಕಷ್ಟ. ಅಭ್ಯರ್ಥಿಗಳೇ ಎಚ್ಚೆತ್ತುಕೊಂಡು ಸರಿಯಾದ ಮಾರ್ಗದಲ್ಲಿ ನೌಕರಿಗೆ ಪ್ರಯತ್ನಿಸುವುದೇ ಇದಕ್ಕೆಲ್ಲ ಪರಿಹಾರ.
ಸುಘೋಷ ಸ. ನಿಗಳೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.