ADVERTISEMENT

ಒತ್ತಡ ತರುವ ತಂತ್ರ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 19:30 IST
Last Updated 20 ನವೆಂಬರ್ 2022, 19:30 IST

ಕಾಂಗ್ರೆಸ್‌ ಪಕ್ಷವನ್ನು ಹೀನಾಯ ಸ್ಥಿತಿಯಿಂದ ಹೊರತಂದು ಬಲಪಡಿಸುವುದಕ್ಕೆ ಪೂರಕವಾಗಿ ಉನ್ನತ ಮಟ್ಟದ ಸಭೆ ಕರೆಯುವಂತೆ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕೆಲವು ಹಿರಿಯರು ಈ ಹಿಂದೆ ಪತ್ರ ಬರೆದು ಒತ್ತಾಯಿಸಿದಾಗ, ಈ ನಾಯಕರಲ್ಲಿದ್ದ ತಳಮಳವನ್ನು ಅರಿಯದೆ ಅವರನ್ನು ಮೂಲೆಗುಂಪು ಮಾಡಲಾಯಿತು. ಅಲ್ಲದೆ ಅವರನ್ನೇ ‘ಪಕ್ಷದ ವಿರೋಧಿಗಳು’ ಎಂಬಂತೆ ನಡೆಸಿಕೊಳ್ಳಲಾಯಿತು. ಈಗ ಅಜಯ್ ಮಾಕನ್ ಅವರು ರಾಜಸ್ಥಾನದ ಉಸ್ತುವಾರಿಯಾಗಿ ಮುಂದುವರಿಯುವುದಕ್ಕೆ ನಿರಾಕರಿಸಿ, ತಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಮತ್ತೊಂದು ಕಡೆ, ರಾಜಸ್ಥಾನದಲ್ಲಿ ಪಕ್ಷವು ಕರೆದಿದ್ದ ವಿಧಾನಸಭಾ ಸದಸ್ಯರ ಸಭೆಗೆ ಬಹಿಷ್ಕಾರ ಹಾಕಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿನ್ ಪೈಲಟ್ ಅವರು ಪಕ್ಷದ ಅಧ್ಯಕ್ಷರನ್ನು ಕೋರಿದ್ದಾರೆ.

ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಪಕ್ಷದ ನಿಷ್ಠಾವಂತರೆಂದು ಗುರುತಿಸಿಕೊಂಡಿದ್ದ ಈ ನಾಯಕರು ಈಗ ಅಧ್ಯಕ್ಷರಿಗೇ ಪತ್ರ ಬರೆದು ಹೀಗೆ ಆಗ್ರಹಿಸುವ ಧೈರ್ಯ ಪಡೆದಿದ್ದಾದರೂ ಹೇಗೆ? ಈ ಎರಡನೇ ವರ್ಗದ ನಾಯಕರ ‘ಒತ್ತಡ ತರುವ’ ತಂತ್ರವನ್ನು ಖರ್ಗೆ ಹೇಗೆ ಸ್ವೀಕರಿಸುವರು? ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕಪಿಲ್ ಸಿಬಲ್ ಮೊದಲಾದವರನ್ನು ನೇಪಥ್ಯಕ್ಕೆ ಸರಿಸಿದಂತೆ, ಇವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯವನ್ನು ಪ್ರದರ್ಶಿಸುವರೇ?

⇒ಪಿ.ಸಿ.ಕೇಶವ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.