ADVERTISEMENT

ನಾನೂ ಲೆಫ್ಟ್‌... ಆದ್ರೇ ನಾನೇ ಲೆಫ್ಟ್‌...

ಡಿ.ಬಿ, ನಾಗರಾಜ
Published 5 ಮೇ 2018, 18:32 IST
Last Updated 5 ಮೇ 2018, 18:32 IST

ವಿಜಯಪುರ: ‘ಬಿಜೆಪಿಯಲ್ಲಿದ್ದ ಮೂಲ ಲೆಫ್ಟ್‌ (ಎಡಗೈ) ನಾನೇ. ಆದ್ರೇ ಹೊರಗಿಂದ (ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ) ಬಂದವ್ರು ನನ್ನನ್ನೇ ಲೆಫ್ಟ್‌ (ಹೊರ ಹಾಕಿದರು) ಮಾಡ್ಬಿಟ್ಟ್ರು...’

ನಾಗಠಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಠ್ಠಲ ಕಟಕದೊಂಡ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹಾಸ್ಯಭರಿತ ದಾಟಿಯಲ್ಲಿ ಉತ್ತರಿಸಿದ ಪರಿಯಿದು.

‘ಅಲ್ರೀ... ಬಿಜೆಪಿ ಜಿಲ್ಲಾ ಘಟಕದ ಬಾಸ್‌ ನೀವೇ ಆಗಿದ್ರಿ. ನಿಮ್ಮ ಅಣತಿಯಂತೆ ಎಲ್ಲವೂ ನಡೆಯುತ್ತಿತ್ತು.

ADVERTISEMENT

ಯಡಿಯೂರಪ್ಪ ಅವರ ಒಡನಾಡಿ ಆಗಿದ್ರಿ. ಕೇಂದ್ರ ಸಚಿವ ಜಿಗಜಿಣಗಿ ನಿಮ್ಮನ್ನು ‘ನನ್ನ ಸಣ್ತಮ್ಮನಿದ್ದಂತೆ’ ಅನ್ತಿದ್ದರು. ನಿಮಗೇ ಹಿಂಗಾದ್ರೆ ಹೆಂಗ್ರೀ’ ಎಂದು ಪತ್ರಕರ್ತ ಸಮೂಹ ಕಟಕದೊಂಡ ಅವರ ಕಾಲೆಳೆಯಿತು.

‘ನೀವ್ ಹೇಳಿದ್ದು ಎಲ್ಲಾ ಖರೆ ಐತ್ರೀ. ಆದರೆ ಏನ್ಮಾಡೋದ್ರೀ. ಆರಂಭದ ದಿನಗಳಲ್ಲಿ ಬಿಜೆಪಿ ಕಟ್ಟೋವಾಗ ನನ್ನನ್ನು ಬೈದೋರೇ ಈಗ ನಮ್ಮನ್‌ ಹೊರ ದಬ್ಯಾರ‍್ರೀ. ಅದ್ರಲ್ಲೂ ನಮ್ಮ ಜಿಗಜಿಣಗಿಯಣ್ಣ ಏನಾದ್ರೂ ಆತ್ಮೀಯವಾಗಿ, ನಮ್ಮ ಭುಜದ ಮೇಲೆ ಕೈ ಹಾಕಿ ಮಾತಾಡಿದ್ರೂ ಅಂದ್ರೇ; ಏನೋ ಲೆಕ್ಕಾಚಾರ ಹಾಕಿರ್ತಾರ‍್ರೀ. ಯಾವಾಗ ಯಾವ ರೀತಿ ದಾಳ ಉರುಳಿಸಿ ನಮ್ಮನ್‌ ಮುಳುಗುಸ್ತಾರೆ ಎಂಬುದೇ ಗೊತ್ತಾಗಲ‍್ರೀ..!’ ಎಂದು ಕಟಕದೊಂಡ ಹೇಳುತ್ತಿದ್ದಂತೆ ಕಿಕ್ಕಿರಿದ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ಮುಳುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.