ರಾಜ್ಯದಲ್ಲಿ ರೈಲ್ವೆ ಯೋಜನೆಗಳ ವಿಳಂಬಕ್ಕೆ `ಭೂಸ್ವಾಧೀನ ಪೂರ್ಣಗೊಳಿಸಿಲ್ಲ; ಭೂಮಿ ಹಸ್ತಾಂತರ ಮಾಡಿಲ್ಲ.....~ ಎಂದು ಇನ್ನುಮುಂದೆ ರೈಲ್ವೆ ಇಲಾಖೆ ಕುಂಟುನೆಪಗಳನ್ನು ಹೇಳುವ ಹಾಗಿಲ್ಲ.
ಬೇಕಾಗಿರುವ ಒಟ್ಟು 2,494 ಎಕರೆ ಪೈಕಿ 2,400 ಎಕರೆ ಜಮೀನನ್ನು ರಾಜ್ಯ ಸರ್ಕಾರ ರೈಲ್ವೆಗೆ ಹಸ್ತಾಂತರ ಮಾಡಿದೆ. ಅಂದರೆ ಬಾಕಿ ಇರುವುದು ಕೇವಲ 94 ಎಕರೆ ಮಾತ್ರ. ಅದು ಕೂಡ ಸ್ವಲ್ಪ ದಿನದಲ್ಲಿ ಹಸ್ತಾಂತರವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರೈಲ್ವೆ ಯೋಜನೆಗಳ ವಿಳಂಬಕ್ಕೆ ಭೂಸ್ವಾಧೀನ ಪ್ರಕ್ರಿಯೆಯೇ ದೊಡ್ಡ ತಲೆನೋವಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಸಭೆ ಕರೆದಾಗಲೆಲ್ಲ ಭೂಸ್ವಾಧೀನದ್ದೇ ಚರ್ಚೆ. ಇನ್ನು ಮುಂದೆ ಹೊಸ ಯೋಜನೆಗಳಿಗೆ ಭೂಮಿ ಕೇಳಿದ ತಕ್ಷಣವೇ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
2010ರ ನಂತರ ಮಂಜೂರಾದ ಯೋಜನೆಗಳಿಗೆ ಮಾತ್ರ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ. ಹಳೆ ಯೋಜನೆಗಳಿಗೆ ಸಂಬಂಧಿಸಿದ 2,494 ಎಕರೆ ಭೂಸ್ವಾಧೀನಕ್ಕೆ ರೈಲ್ವೆಯೇ ಹಣ ನೀಡಿದೆ.
`ಭೂಸ್ವಾಧೀನ ಕುರಿತ ದೂರುಗಳಿಂದ ರೋಸಿಹೋಗಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನವನ್ನು `ತುರ್ತು~ ನಿಯಮಗಳಡಿ ಕೈಗೆತ್ತಿಕೊಂಡು, ಆದಷ್ಟು ಬೇಗ ಹಸ್ತಾಂತರ ಮಾಡಬೇಕೆಂದು ಕಟ್ಟಾಜ್ಞೆ ಮಾಡಿದರು. ಅದರ ಫಲವಾಗಿ ಇವತ್ತು ರೈಲ್ವೆಗೆ ಪೂರ್ಣ ಪ್ರಮಾಣದ ಭೂಮಿ ಹಸ್ತಾಂತರ ಮಾಡಲಾಗಿದೆ~ ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಹಾಸನ- ಬೆಂಗಳೂರು, ಮೈಸೂರು- ಬೆಂಗಳೂರು, ಕೊಟ್ಟೂರು- ಹರಿಹರ, ಕಡೂರು- ಚಿಕ್ಕಮಗಳೂರು, ಅರಸೀಕೆರೆ- ಬೀರೂರು, ಕೋಲಾರ- ಚಿಕ್ಕಬಳ್ಳಾಪುರ, ಮುನಿರಾಬಾದ್- ಮೆಹಬೂಬ್ನಗರ, ಶಿವಮೊಗ್ಗ- ತಾಳಗುಪ್ಪ.... ಹೀಗೆ ಎಲ್ಲ ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ತುಮಕೂರು- ರಾಯದುರ್ಗ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ರೈಲ್ವೆ ಇಲಾಖೆ ಪತ್ರ ಬರೆದಿದ್ದು, ಸದ್ಯದಲ್ಲೇ ಅದು ಕೂಡ ಪೂರ್ಣವಾಗುವ ಸಾಧ್ಯತೆ ಇದೆ.
ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸುಮಾರು 102 ಕಿ.ಮೀ ಉದ್ದದ ರೈಲ್ವೆ ಮಾರ್ಗ ಹಾದು ಹೋಗಲಿದ್ದು, ಇದರಲ್ಲಿ ಸುಮಾರು 52 ಕಿ.ಮೀಗೆ ಬೇಕಾಗುವಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತುಮಕೂರು ನಗರದ ಆಸುಪಾಸು ಸೇರಿದಂತೆ ಇನ್ನೂ ಕೆಲ ಕಡೆ ಭೂಸ್ವಾಧೀನ ಬಾಕಿ ಇದೆ.
ಬಾಗಲಕೋಟೆ- ಕುಡಚಿ ನಡುವಿನ 141 ಕಿ.ಮೀ ಉದ್ದದ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರವೇ ತನ್ನ ಖರ್ಚಿನಲ್ಲಿ ಭೂಸ್ವಾಧೀನ ಮಾಡಿದೆ. ರೈಲ್ವೆ ಇಲಾಖೆ ಜಮೀನು ಕೋರಿದ ಕೇವಲ ಎಂಟು ತಿಂಗಳಲ್ಲಿಯೇ ಭೂಮಿ ಹಸ್ತಾಂತರ ಮಾಡಿದ್ದು, ಇದೊಂದು ದಾಖಲೆ ಅವಧಿಯ ಭೂಸ್ವಾಧೀನ ಎಂದೂ ಬಣ್ಣಿಸಲಾಗಿದೆ.
ವಿಳಂಬಕ್ಕೆ ರೈಲ್ವೆ ಕಾರಣ: `ಭೂಸ್ವಾಧೀನ ವಿಳಂಬಕ್ಕೆ ರಾಜ್ಯ ಸರ್ಕಾರಕ್ಕಿಂತ ರೈಲ್ವೆ ಇಲಾಖೆಯೇ ಪ್ರಮುಖ ಕಾರಣ. ಬಜೆಟ್ನಲ್ಲಿ ಯೋಜನೆ ಪ್ರಕಟಿಸಿದ ತಕ್ಷಣವೇ ಜಮೀನಿಗೆ ಬೇಡಿಕೆ ಸಲ್ಲಿಸಿ, ಹಣ ಸಂದಾಯ ಮಾಡಿದ್ದರೆ ಈ ವೇಳೆಗೆ ಎಲ್ಲ ಯೋಜನೆಗಳಿಗೂ ಭೂಮಿಯನ್ನು ಹಸ್ತಾಂತರ ಮಾಡಬಹುದಿತ್ತು. ಆದರೆ, ರೈಲ್ವೆ ಇಲಾಖೆ ಹಂತ ಹಂತವಾಗಿ ಪ್ರಸ್ತಾವಗಳನ್ನು ಸಲ್ಲಿಸುತ್ತದೆ. ಅದರ ನಂತರ ಹಣ ನೀಡುವುದೂ ವಿಳಂಬ.
ಈ ಕಾರಣದಿಂದ ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಯಿತು~ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಉದಾಹರಣೆಗೆ ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗದ ಯೋಜನೆ ಕೈಗೆತ್ತಿಕೊಂಡು ಹಲವು ವರ್ಷಗಳೇ ಕಳೆದರೂ ಅದಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಇದುವರೆಗೂ ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣ ರೈಲ್ವೆ ಇಲಾಖೆ. `ಕಾಲಕಾಲಕ್ಕೆ ಪ್ರಸ್ತಾವಗಳನ್ನು ಸಲ್ಲಿಸಿ, ಜಮೀನು ಕೇಳಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಒಂದು ಹಂತದ ಯೋಜನೆ ಪೂರ್ಣಗೊಂಡ ನಂತರ ಮತ್ತೊಂದು ಹಂತದ ಯೋಜನೆಯನ್ನು ಪ್ರಾಥಮಿಕ ಹಂತದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.
ಇದರಿಂದ ವಿಳಂಬವಾಯಿತು~ ಎನ್ನುವುದು ರೈಲ್ವೆ ಇಲಾಖೆ ಅಧಿಕಾರಿಗಳ ವಿವರಣೆ. `ಯೋಜನೆಗೆ ಮಂಜೂರಾತಿ ಸಿಕ್ಕ ನಂತರ ಭೂಸ್ವಾಧೀನಕ್ಕೆ ರೈಲ್ವೆ ಅಧಿಕಾರಿಗಳು ಬೇಡಿಕೆ ಸಲ್ಲಿಸಬೇಕು. ಅದೇ ಸಂದರ್ಭದಲ್ಲಿ ಹಣ ಕೂಡ ಬಿಡುಗಡೆ ಮಾಡಬೇಕು. ಹಾಗೆ ಮಾಡಿದಾಗ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಆಗುವುದನ್ನು ತಡೆಯಬಹುದು~ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ತಕ್ಷಣ ಜಮೀನು: ತುಮಕೂರು- ಚಿತ್ರದುರ್ಗ; ಶಿವಮೊಗ್ಗ- ಹರಿಹರ; ವೈಟ್ಫೀಲ್ಡ್- ಕೋಲಾರ ನಡುವಿನ ರೈಲ್ವೆ ಯೋಜನೆಗಳಿಗೆ ಜಮೀನು ಕೇಳಿದ ತಕ್ಷಣವೇ ಸರ್ಕಾರ ನೀಡಲು ಸಿದ್ಧತೆ ನಡೆಸಿದೆ. ಈ ಯೋಜನೆಗಳಿಗೂ ರಾಜ್ಯ ಸರ್ಕಾರವೇ ಭೂಮಿ ವೆಚ್ಚವನ್ನೂ ಭರಿಸಲಿದೆ. ಹೀಗಾಗಿ ಹಣ ಬಿಡುಗಡೆಗೂ ರಾಜ್ಯ ಸರ್ಕಾರ ತುದಿಗಾಲ ಮೇಲೆ ನಿಂತಿದೆ. ಆದರೆ, ರೈಲ್ವೆ ಮಾತ್ರ ಆ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಈ ಯೋಜನೆಗಳು ಕೇವಲ ಘೋಷಣೆಯಾಗಿಯೇ ಉಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.